ವಿಜಯಪುರ: ಸಂತೋಷ್ ಆತ್ಮಹತ್ಯೆಗೆ ಯಾರ ಸಂಬಂಧವೂ ಇಲ್ಲ. ಆತ್ಮಹತ್ಯೆಗೆ ಅನೇಕ ಕಾರಣಗಳು ಇರುತ್ತವೆ. ಅವರ ಜೀವನದಲ್ಲಿ ಜಿಗುಪ್ಸೆ ಆಗಿರಬಹುದು ಹೀಗಾಗಿ ಸಂತೋಷ್ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಶ್ವರಪ್ಪ ಪರವಾಗಿ ಮಾತನಾಡಿದರು.
ಸಾಲ ಸೋಲ ಹೆಚ್ಚಾಗಿ ಅಥವಾ ಕುಟುಂಬದ ಸಮಸ್ಯೆಯಿಂದಾಗಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ತಮ್ಮ ವಯಕ್ತಿಕ ವಿಚಾರವನ್ನು ತಂದು, ವ್ಯಕ್ತಿ ಹಾಗೂ ಪಕ್ಷದ ವಿರುದ್ಧ ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ: ಸಂತೋಷ್ ಪತ್ನಿ ಕಣ್ಣೀರು
ಶೇ.40 ಲಂಚಕ್ಕಾಗಿ ಆತ್ಮಹತ್ಯೆ ಎನ್ನುವುದು ಸಂಪೂರ್ಣ ಸುಳ್ಳು. ಈಶ್ವರಪ್ಪ ಶೇ.40 ಲಂಚ ತೆಗೆದುಕೊಳ್ಳುತ್ತಾರೆ ಎನ್ನುವುದಾದರೆ ಅದಕ್ಕೆ ಸಾಕ್ಷಿ ಏನಿದೆ? ಇದು ಹೇಗೆ ಸಾಧ್ಯ? ಈ ಬಗ್ಗೆ ತನಿಖೆಯಾಗಲಿ. ಕೆಲವರು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ಹಣ ಕೇಳುವವರೂ ಇರುತ್ತಾರೆ ಎಂದು ತಿಳಿಸಿದರು.
ಈಶ್ವರಪ್ಪ ಇಂತಹ ಕೀಳುಮಟ್ಟಕ್ಕೆ ಹೋಗುವವರು ಅಲ್ಲ. ಈಶ್ವರಪ್ಪ ವಿರುದ್ದ ಬರೆದಿಟ್ಟು, ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಎಲ್ಲರೂ ಹಾಗೇ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದರು. ಇದನ್ನೂ ಓದಿ: ಎಫ್ಎಸ್ಎಲ್ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ: ಉಡುಪಿ ಎಸ್ಪಿ
ಕಾಂಗ್ರೆಸ್ನವರು ಇಂಥವನೊಬ್ಬನನ್ನು ರೆಡಿ ಮಾಡ್ತಾರೆ. ಅವನಿಂದ ಹೇಳಿಕೆ ಕೊಡಿಸುತ್ತಾರೆ. ಇಂತಹ ಘಟನೆಗಳು ರಾಜಕಾರಣದಲ್ಲಿ ಬಹಳ ನಡೆಯುತ್ತವೆ. ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ಹತಾಷೆಗೊಂಡು ಹೀಗೆಲ್ಲಾ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.