ಉಡುಪಿ: ಸಂತೋಷ್ ಪಾಟೀಲ್ ಇದ್ದ ಶಾಂಭವಿ ಲಾಡ್ಜ್ನ 207ರ ಕೊಠಡಿಯಲ್ಲಿ ಉಡುಪಿ ಪೊಲೀಸರು ಪಂಚನಾಮೆ ಮಾಡಿದ್ದಾರೆ.
ಸಂತೋಷ್ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ, ಸಂತೋಷ್ ಮೇದಪ್ಪ ಸೇರಿ ಕುಟುಂಬದ 7 ಜನರ ಸಮ್ಮುಖದಲ್ಲಿ ಎಫ್ಎಸ್ಎಲ್, ಶ್ವಾನದಳ, ಬೆರಳಚ್ಚು ತಜ್ಞರು ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಸ್ಥಳ ಮಹಜರು ನಡೆಸಿದರು.
ಕೊಠಡಿಯ ಬೆಡ್ಮೇಲೆ ಸಂತೋಷ್ ಅಂಗಾತ ಮಲಗಿದ್ದ ಸ್ಥಿತ್ತಿಯಲ್ಲಿದ್ದರು. ಬಾಯಿಯಲ್ಲಿ ನೊರೆ ತುಂಬಿಕೊಂಡಿತ್ತು. ಕಸದ ಬುಟ್ಟಿಯಲ್ಲಿ ಜ್ಯೂಸ್ ಬಾಟಲ್ ಪತ್ತೆಯಾಗಿದ್ದು, ಜ್ಯೂಸ್ಗೆ ವಿಷ ಬೆರೆಸಿ ಸೇವಿಸಿರಬಹುದು ಅಂತ ಶಂಕಿಸಲಾಗಿದೆ.
ಬಾಟಲ್, ಪ್ಯಾಕೆಟ್, ಬ್ಯಾಗ್, ಚಪ್ಪಲಿ, ವಾಟರ್ ಬಾಟಲ್ ಅನ್ನು ಸೀಜ್ ಮಾಡಲಾಗಿದೆ. ಲಾಡ್ಜ್ ಆವರಣದಲ್ಲಿದ್ದ ಕಾರನ್ನು ಪೊಲೀಸರು ಪರಿಶೀಲಿಸಿ, ಕಾರಿನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಕುಟುಂಬಸ್ಥರು ಈಶ್ವರಪ್ಪ ಮತ್ತವರ ಆಪ್ತರ ಬಂಧನ ಆಗುವರೆಗೂ ದೇಹ ಮುಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಪೊಲೀಸರು ಮನವೊಲಿಸಿದರು. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್ – ಆತ್ಮಹತ್ಯೆಗೆ ಕಾರಣ ಏನು?
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಐಜಿಪಿ ದೇವಜ್ಯೋತಿ ರೇ ಮಾತಾಡಿ, ಅಸಹಜ ಸಾವು, ಆತ್ಮಹತ್ಯೆ ಎರಡು ಕೇಸ್ ದಾಖಲಿಸಿದ್ದೇವೆ. ದೂರಿನ ಅನ್ವಯ ಈಶ್ವರಪ್ಪ ಮತ್ತಿಬ್ಬರು ಆಪ್ತರ ಮೇಲೆ ಎಫ್ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದರು. ಆಘಾತಗೊಂಡಿರುವ ಪತ್ನಿ ಜಯಶ್ರೀ, ತಾಯಿ ಪಾರ್ವತಿ ಎಲ್ಲರೂ ನ್ಯಾಯ ಸಿಗಬೇಕು ಅಂತ ಆಗ್ರಹಿಸಿದ್ದಾರೆ.