ರಾಯಚೂರು: ನಗರಸಭೆ ಸರಬರಾಜು ಮಾಡುವ ನೀರನ್ನು ಕುಡಿದು ನೂರಾರು ಜನ ಹಾಗೂ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಕಲುಷಿತ ನೀರು ಕುಡಿದ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಇಂದಿರಾನಗರ ನಿವಾಸಿ ಮಲ್ಲಮ್ಮ(40) ನಿರ್ಜಲೀಕರಣದಿಂದ ಸಾವನ್ನಪ್ಪಿದ ಮಹಿಳೆ. ಇನ್ನೂ ರಿಮ್ಸ್ ಆಸ್ಪತ್ರೆಯಲ್ಲಿ 60 ಕ್ಕೂ ಹೆಚ್ಚು ಜನ ದಾಖಲಾಗಿದ್ದಾರೆ. ಅವರಲ್ಲಿ ಹಲವರಿಗೆ ಕಿಡ್ನಿ ಸಮಸ್ಯೆ ಎದುರಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿರ್ಜಲೀಕರಣದ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ನಿರ್ಜಲೀಕರಣದಿಂದ ಖಾಸಗಿ ಆಸ್ಪತ್ರೆಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಇದರಲ್ಲಿ 23ಕ್ಕೂ ಹೆಚ್ಚು ಚಿಕ್ಕಮಕ್ಕಳು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಕುಡಿದ ಹಿನ್ನೆಲೆ ಹಲವರಲ್ಲಿ ಮೂತ್ರಪಿಂಡ ಸಮಸ್ಯೆ ಎದುರಾಗಿದೆ. ರೋಗಿಗಳಿಗೆ ಡಯಾಲೈಸಿಸ್ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಂದಲೇ ವಾರ್ಡ್ಗಳು ತುಂಬುತ್ತಿವೆ. ನಗರಸಭೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು
ಕಳೆದ ಒಂದು ವಾರದಿಂದ ಕಲುಷಿತ ನೀರನ್ನು ಕುಡಿದ ಕಾರಣಕ್ಕೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಚಿಕ್ಕಮಕ್ಕಳು ಹಾಗೂ ದೊಡ್ಡವರಿಗೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ರಿಮ್ಸ್ ವೈದ್ಯರು ತಿಳಿಸಿದ್ದಾರೆ. ಕೆಲವರಿಗೆ ರಕ್ತದೊತ್ತಡ ನಿಯಂತ್ರಣವಾಗುತ್ತಿದ್ದರೂ, ಕಿಡ್ನಿ ಮೇಲೆ ಪರಿಣಾಮ ಬೀರುತ್ತಿದೆ. ಕಲುಷಿತ ನೀರು ಕುಡಿದ ಹಿನ್ನೆಲೆ ಮೂವರಲ್ಲಿ ಮೂತ್ರಪಿಂಡ ಸಮಸ್ಯೆ ಎದುರಾಗಿದೆ. ಒಬ್ಬರಿಗೆ ಡಯಾಲೈಸಿಸ್ ಮಾಡಲಾಗುತ್ತಿದೆ ಎಂದು ರಿಮ್ಸ್ ವೈದ್ಯರು ಮಾಹಿತಿ ನೀಡಿದರು. ಇದನ್ನೂ ಓದಿ: 130 ಕೋಟಿ ಜನರಿಗೆ ನಾನು ಸೇವಕನಷ್ಟೇ: ನರೇಂದ್ರ ಮೋದಿ
ಹೆಸರಿಗೆ ಮಾತ್ರ ರಾಯಚೂರಿನಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳಿವೆ. ಆದರೆ ನಗರಸಭೆಯ ನಿರ್ಲಕ್ಷ್ಯದಿಂದ ಘಟಕ ನಿರ್ವಹಣೆ ಮಾಡದೆ ಕಲುಷಿತ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಕನಿಷ್ಠ ಈಗಲಾದರೂ ಜಿಲ್ಲಾಡಳಿತ ಹಾಗೂ ನಗರಸಭೆ ಎಚ್ಚೆತ್ತುಕೊಳ್ಳಬೇಕು ಅಂತ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.