ಚಂಡೀಗಢ: ಕಲುಷಿತ ನೀರು ಸೇವಿಸಿ ಏಳು ಮಕ್ಕಳು ಸೇರಿದಂತೆ 15 ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿರಾಕ್ಪುರದ ಗಾಜಿಪುರ ಗ್ರಾಮದಲ್ಲಿ ನಡೆದಿದೆ.
ಇದೀಗ ಏಳು ಮಕ್ಕಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಮೊಹಾಲಿ, ಪಂಚಕುಲ ಮತ್ತು ಅಂಬಾಲಾದಲ್ಲಿ ದಾಖಲಿಸಲಾಗಿದೆ. ಕುಡಿಯುವ ನೀರು ಒಳಚರಂಡಿ ಮಾರ್ಗಗಳಿಂದ ಕಲುಷಿತಗೊಂಡಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಕ್ರೈಸ್ತ ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ – ಪ್ರಮೋದ್ ಮುತಾಲಿಕ್ ಕಿಡಿ
ಭಾನುವಾರ ನೀರು ಕುಡಿದ ನಂತರ ಮಕ್ಕಳು ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದಾರೆ ಎಂದು ಗಾಜಿಪುರದ ನಿವಾಸಿ ಅಭಿಷೇಕ್ ಸೈನಿ ತಿಳಿಸಿದ್ದಾರೆ. ಮತ್ತೋರ್ವ ನಿವಾಸಿ ಗುರುದೀಪ್ ಸಿಂಗ್ ಅವರು, ಕಲುಷಿತ ನೀರನ್ನು ಸೇವಿಸಿದ್ದರಿಂದ ಜನರು ಹೊಟ್ಟೆನೋವಿನಿಂದ ಬಳಲುತ್ತಿದ್ದರೆ ಎಂದಿದ್ದಾರೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ ನೀರು ಸರಬರಾಜು ಇಲಾಖೆಯ ಉಪವಿಭಾಗದ ಇಂಜಿನಿಯರ್ (ಎಸ್ಡಿಇ) ಕರಮ್ಜೀತ್ ಸಿಂಗ್, ಖಾಸಗಿ ಟೆಲಿಕಾಂ ಕಂಪನಿಯು ಕೆಲವು ದಿನಗಳ ಹಿಂದೆ ತಂತಿಗಳನ್ನು ಹಾಕಲು ಈ ಪ್ರದೇಶವನ್ನು ಅಗೆದು ನೀರಿನ ಪೈಪ್ಗಳಿಗೆ ಹಾನಿಗೊಳಿಸಿದೆ. ಇದರ ಪರಿಣಾಮವಾಗಿ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣವಾಗಿದೆ. ಇದೀಗ ಇಲಾಖೆ ಸೋರಿಕೆಯನ್ನು ಮುಚ್ಚಿದೆ ಮತ್ತು ಪೀಡಿತ ಪ್ರದೇಶಗಳಿಗೆ ನೀರಿನ ಪೂರೈಕೆಯನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ 4ನೇ ಅಲೆ: ಸಿಎಂ ನೇತೃತ್ವದಲ್ಲಿ ಇಂದು ಮಹತ್ವದ ಸಭೆ