ರಾಯಚೂರು: ಕಲುಷಿತ ನೀರು (Contaminated Water) ಸೇವಿಸಿ 20ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಪ್ರಕರಣ ಲಿಂಗಸೂರಿನ (Lingsugur) ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜನರು ತಡರಾತ್ರಿಯಿಂದ ತೀವ್ರ ವಾಂತಿ, ಭೇದಿಯಿಂದ ಬಳಲಿದ್ದಾರೆ. ಇದರಿಂದ ಹಲವರು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ಗ್ರಾಮಸ್ಥರನ್ನು ಲಿಂಗಸುಗೂರು, ಸಿಂಧನೂರು ಹಾಗೂ ರಾಯಚೂರಿನ (Raichur) ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಓಗೆ ನೋಟಿಸ್
ಗ್ರಾಮಕ್ಕೆ ಜಿಪಂ ಸಿಇಓ (Raichur ZP CEO) ಶಶಿಧರ್ ಕುರೇರಾ, ಡಿಎಚ್ಓ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯರಗುಂಟಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕಲುಷಿತ ನೀರಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು ನೀರಿನ ಮಾದರಿ ಪಡೆದು ಪರೀಕ್ಷೆಗೆ ರವಾನಿಸಿದ್ದಾರೆ.
ಗ್ರಾಮಸ್ಥರು ಕುಡಿಯಲು ಬೋರ್ವೆಲ್ ನೀರನ್ನು ಬಳಸುತ್ತಿದ್ದರು. ಅಲ್ಲಲ್ಲಿ ಪೈಪ್ ಒಡೆದು ಚರಂಡಿ ನೀರು ಮಿಶ್ರಣಗೊಂಡಿರುವ ಸಾಧ್ಯತೆಗಳಿವೆ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲೆಯ ರೇಕಲಮರಡಿ, ಗೊರೆಬಾಳದಲ್ಲಿ ಇದೆ ರೀತಿಯ ಸಮಸ್ಯೆ ಎದುರಾಗಿ ಬಾಲಕ ಮೃತಪಟ್ಟಿದ್ದ. ಈ ಸಂಬಂಧ ಸಿಇಓ ಶಶಿಧರ್ ಕುರೇರಾ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಬಾಲಕ ಸಾವು – 30ಕ್ಕೂ ಹೆಚ್ಚು ಜನ ಅಸ್ವಸ್ಥ