ಚಿಕ್ಕಬಳ್ಳಾಪುರ: ವಾಷಿಂಗ್ ಮಿಷಿನ್ (Washing Machine) ಕಂಪನಿ ಹೆಸರಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡುವ ನೆಪದಲ್ಲಿ ವಂಚನೆ ಎಸಗುತ್ತಿದ್ದ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ನಡೆದಿದೆ.
ಏನಿದು ಪ್ರಕರಣ..?
ವಿವೇಕಾನಂದ ಎಂಟರ್ಪ್ರೆಸಸ್ ಮಾಲೀಕ ಚರಣ್ ಐಎಫ್ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರರಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಫ್ಬಿ ವಾಷಿಂಗ್ ಮಿಷನ್ ಕೊಳ್ಳುವ ಯಾವುದೇ ಗ್ರಾಹಕರಿಗೆ ಇವರು ಉಚಿತವಾಗಿ ಮನೆಗೆ ಹೋಗಿ ಸೇವೆಕೊಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇವರಂತೆ ಕಂಪನಿಯ ಹೆಸರು ಹೇಳಿಕೊಂಡು ಗ್ರಾಹಕರ ಮನೆಗೆ ಹೋಗುತ್ತಿದ್ದ ಮಂಡ್ಯ ಶ್ರೀರಂಗಪಟ್ಟಣ ತುರುವೇಕೆರೆ ಮೂಲದ ಅರ್ಜುನ್, ದರ್ಶನ್, ಮಂಜುನಾಥ್ ಎಂಬ ಖದೀಮರು ನಾವೇ ಐಎಫ್ಬಿ ಕಂಪನಿ ಸೇವಾದಾರರು ಎಂದು ಗ್ರಾಹಕರ ಮನೆಗೆ ತರಳಿ ಯಂತ್ರದಲ್ಲಿರುವ ಅಸಲಿ ಯಂತ್ರಗಳನ್ನು ಕಳಸಿಕೊಂಡು ನಕಲಿ ಮತ್ತು ಕಳಪೆ ವಸ್ತುಗಳನ್ನು ಅದಕ್ಕೆ ಹಾಕಿ ಸಾವಿರಾರು ರೂಪಾಯಿ ಸೇವಾಶುಲ್ಕವಾಗಿ ಪಡೆದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಕಳೆದ 2 ತಿಂಗಳಿಂದ ಪದೇ ಪದೇ ಗ್ರಾಹಕರಿಂದ ದೂರು ಬರುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಐಎಫ್ಬಿ ಕಂಪನಿ ಅಧಿಕೃತ ಸೇವಾದಾರ ಚರಣ್ ಖದೀಮರ ಹೆಡೆಮುರಿ ಕಟ್ಟಲು ತೀರ್ಮಾನಿಸಿ ಹೊಂಚುಹಾಕಿದ್ದು ಇವರು ಬೀಸಿದ ಬಲೆಗೆ ಅವರು ಬಿದ್ದಿದ್ದಾರೆ.
ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಸಮೀಪದ ಮನೆಯೊಂದಕ್ಕೆ ಸೇವೆ ನೀಡುವ ನೆಪದಲ್ಲಿ ಬಂದಿದ್ದ ಖದೀಮರನ್ನು ವಿವೇಕಾನಂದ ಎಂಟರ್ಪ್ರೈಸಸ್ ಮಾಲೀಕ ಹಾಗೂ ಐಎಫ್ಬಿ ವಾಷಿಂಗ್ ಮಿಷನ್ ಅಧಿಕೃತ ಸೇವಾದಾರ ಚರಣ್ ಮತ್ತು ತಂಡ ದಿಢೀರ್ ದಾಳಿ ನಡೆಸಿ 5 ಮಂದಿಯ ಪೈಕಿ ಮೂವರನ್ನು ಪೊಲೀಸರಿಗೆ ಒಪ್ಪಿಸಿ ವಂಚಕರ ಬೃಹತ್ ಜಾಲ ಬೇಧಿಸಲು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚರಣ್, ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಈ ತಂಡ ಕಳೆದ ಐದಾರು ತಿಂಗಳಿಂದ ಸುಮಾರು 400 ರಿಂದ 500 ಮಂದಿಗೆ ಟೋಪಿ ಹಾಕಿದ್ದಾರೆ. ಯಂತ್ರದ ಕ್ಲೀನಿಂಗ್ ಪೌಂಡರ್ ಬದಲಿಸುತ್ತೇವೆ ಎಂದು ಹೇಳಿ ಉಪ್ಪನ್ನು ತುಂಬಿದ್ದಾರೆ. ಇದರ ಬೆಲೆ 10 ರೂ. ಇದ್ದರೆ 300 ರೂ. ಬಿಲ್ ಮಾಡಿದ್ದಾರೆ. ನೀರಿನ ಫಿಲ್ಟರ್ ಒಂದಕ್ಕೆ ಕಂಪನಿಯಲ್ಲಿ 2,600 ರೂಪಾಯಿ ಇದ್ದರೆ ಇವರು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಕಂಪನಿ ವಸ್ತುಗಳನ್ನು ಲಪಟಾಯಿಸಿ ನಕಲು ವಸ್ತುಗಳನ್ನು ಹಾಕಿ ಯಂತ್ರಗಳು ಹಾಳಾಗುವಂತೆ ಮಾಡಿ ಗ್ರಾಹಕರಿಗೆ ಲಕ್ಷಾಂತರ ಹಣ ವಂಚನೆ ಮಾಡಿದ್ದಾರೆ. ವಂಚನೆಯೇ ಇವರ ಕಸುಬಾಗಿದ್ದು ಸುಮಾರು 500 ಮಂದಿ ಇರಬಹುದು ಎಂದು ಶಂಕಿಸಲಾಗಿದೆ. ಈಗ ಬಂಧನಕ್ಕೆ ಒಳಗಾಗಿರುವವರನ್ನು ಪೊಲೀಸರು ಬಾಯಿಬಿಡಿಸಿದರೆ ಇವರ ಮೋಸ ಬಯಲಿಗೆ ಬರಲಿದೆ ಎಂದು ತಿಳಿಸಿದರು. ಮೂವರನ್ನ ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ನಗರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.