ಬೆಂಗಳೂರು: ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಈ ಒಂದು ಮಂತ್ರದ ಮೂಲಕ ಎಲ್ಲರಿಗೂ ಯೋಜನೆ ತಲುಪುವಂತೆ ಮಾಡಲಾಗಿದೆ. ಯಾವುದೇ ಯೋಜನೆಯಲ್ಲಿ ಜಾತಿ ಯಾವುದೆಂದು ನರೇಂದ್ರ ಮೋದಿಯವರು ಕೇಳಿಲ್ಲ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ್ಧನ್ ಖಾತೆ ಕೊಟ್ಟರು. ಜಾತಿ ಯಾವುದೆಂದು ಕೇಳಿ ಕೊಟ್ಟಿದ್ದಾರಾ? ಕಿಸಾನ್ ಸಮ್ಮಾನ್ ಕೊಡುವಾಗ ನಿಮ್ಮ ಜಾತಿ ಯಾವುದೆಂದು ಕೇಳಿದ್ದಾರಾ? ಎಲ್ಲರಿಗೂ ಅಕ್ಕಿ ಕೊಡುವಾಗ ಜಾತಿ ಯಾವುದೆಂದು ಕೇಳಿ ಕೊಟ್ಟರೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ‘ಸೌಗತ್-ಎ-ಮೋದಿ’ ಅಭಿಯಾನದಡಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ಈದ್ ಕಿಟ್
ಜಾತಿ ಕೇಳುವುದು, ಮತಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ. ಅದು ಮೋದಿಯವರ ನೀತಿಯಲ್ಲ ಎಂದು ತಿಳಿಸಿದರು. ಪ್ರಿಯಾಂಕ್ ಖರ್ಗೆಯವರೇ ಪೇಪರ್ ಓದಿದ್ದರೆ ಪೂರ್ತಿ ಓದಿ. ಇದು ಸರ್ಕಾರದ ಕಾರ್ಯಕ್ರಮವಲ್ಲ ಎಂಬುದು ಅರ್ಥವಾಗುತ್ತದೆ. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾವು ತಾನು ಖಾಸಗಿಯಾಗಿ ರಂಜಾನ್ ಹಿನ್ನೆಲೆಯಲ್ಲಿ ಮೋದಿಯವರ ಹೆಸರಿನಲ್ಲಿ 32 ಲಕ್ಷ ಕಿಟ್ ವಿತರಿಸುತ್ತಿದೆ. ಅದು ಸರ್ಕಾರ ಮಾಡುವುದಲ್ಲ. ಬಿಜೆಪಿ ಮಾಡುತ್ತಿರುವುದೂ ಅಲ್ಲ. ಬಿಜೆಪಿಯ ಒಂದು ಮೋರ್ಚಾವು ಮೋದಿಯವರ ಹೆಸರಿನಲ್ಲಿ ಕಿಟ್ ನೀಡುತ್ತಿದೆ. ಸರ್ಕಾರದ ಕಾರ್ಯಕ್ರಮ ಬೇರೆ, ಒಬ್ಬ ವ್ಯಕ್ತಿ, ಮೋರ್ಚಾ ಮಾಡುವ ಕಾರ್ಯಕ್ರಮವೇ ಬೇರೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ಸಿನದು ಒಂದು ಕಣ್ಣಿಗೆ ಬೆಣ್ಣೆ
ಬಿಜೆಪಿ ಸರ್ಕಾರವು ಎಲ್ಲ ಜಾತಿಯವರಿಗೆ ಸೌಲಭ್ಯ ಕಲ್ಪಿಸಿದೆ. ಜಾತಿ ಮುಖ ನೋಡಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದು ಕೇವಲ ಕಾಂಗ್ರೆಸ್ ಪಕ್ಷ ಎಂದು ಸಿ.ಟಿ.ರವಿ ಆಕ್ಷೇಪಿಸಿದರು. ಇದು ಸರ್ಕಾರದ ದುಡ್ಡಲ್ಲ, ಮೈನಾರಿಟಿ ಮೋರ್ಚಾದ ಅಧ್ಯಕ್ಷರ ಕಾರ್ಯಕ್ರಮ. ನೀವು ಸರ್ಕಾರದ ದುಡ್ಡಲ್ಲಿ ಮುಸ್ಲಿಮರಿಗೆ ಮಾತ್ರ ಮದುವೆಗೆ ಮೊತ್ತ ಕೊಡುವ ಶಾದಿ ಭಾಗ್ಯ ತಂದಿದ್ದೀರಿ. ಮೊನ್ನೆ ಸಂವಿಧಾನ ವಿರೋಧಿಯಾಗಿ ಶೇ.4ರಷ್ಟು ಮತೀಯ ಆಧಾರಿತ ಮೀಸಲಾತಿಯನ್ನು ನೀವು ಡಾ.ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿ ತಂದಿದ್ದೀರಿ? ಸಂವಿಧಾನದಲ್ಲಿ ಮತೀಯ ಆಧಾರಿತ ಮೀಸಲಾತಿಗೆ ಎಲ್ಲಿ ಅವಕಾಶ ಇದೆ ಎಂದು ಕೇಳಿದರು. ಇದನ್ನೂ ಓದಿ: ಮೋದಿ ಹೆಸ್ರಲ್ಲಿ 32 ಲಕ್ಷ ಗಿಫ್ಟ್ ಕಿಟ್ ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? – ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಆ ವ್ಯತ್ಯಾಸವೇ ಗೊತ್ತಿಲ್ಲದೇ ನೀವು ಮಾತನಾಡುತ್ತೀರಲ್ಲವೇ? ನಮ್ಮ ಯಾವುದೇ ಯೋಜನೆಗಳಲ್ಲಿ ಜಾತಿ, ಮತಗಳನ್ನು ಪರಿಗಣಿಸಿಲ್ಲ. ಜಾತಿ-ಮತ ಪರಿಗಣಿಸಿ ಸಮಾಜ ಒಡೆಯುವ ಕೆಲಸ, ದೇಶ ಒಡೆಯುವ ಕೆಲಸ ಮಾಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಟೀಕಿಸಿದರು.