ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ವಿರುದ್ಧ ಜಿಲ್ಲೆಯ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.
ನಗರದ ಟೌನ್ ಹಾಲ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ, ತುಮಕೂರಿನಲ್ಲಿ ದೇವೇಗೌಡರು ನಿಂತರೆ ಸೋಲಿಸುತ್ತೇವೆ. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಲೇಬೇಕು ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಆಗ್ರಹಿಸಿದ್ದಾರೆ.
44 ಜನ ಕಾಂಗ್ರೆಸ್ ನ ಸಂಸದರು ಗೆದ್ದಿದ್ದಾರೆ. ಅದರಲ್ಲಿ 43 ಮಂದಿಗೆ ಟಿಕೆಟ್ ಕೊಟ್ಟು ಮುದ್ದಹನುಮೇಗೌಡರಿಗೆ ತಪ್ಪಿಸುವುದು ಸರಿಯಲ್ಲ. ಅವರು ಹೆಚ್ಚು ಕ್ರಿಯಾಶೀಲರಾಗಿ ಸಂಸತ್ ನಲ್ಲಿ ಮಾತನಾಡಿದ್ದಾರೆ. ಅಂಥವರಿಗೇ ಟಿಕೆಟ್ ತಪ್ಪಿಸುವುದು ಅಂದರೆ ಏನಿದು. ಇದರ ಹಿಂದುಗಡೆ ಏನಿದೆ ಎಂಬುದು ನಮಗೆ ಬೇಕಿಲ್ಲ. ಸಮ್ಮಿಶ್ರ ಸರ್ಕಾರ ಬೇರೆ ಜಿಲ್ಲೆಗಳಿಗೆ, ನಮ್ಮ ಜಿಲ್ಲೆಗೆ ಏನಿದ್ರೂ ಕಾಂಗ್ರೆಸ್ ಮಾತ್ರ. ಜೆಡಿಎಸ್ ಗೆ ಟಿಕೆಟ್ ನೀಡಿದ್ರೆ ನಾವೇ ಗೌಡರನ್ನು ಸೋಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಟಿಕೆಟ್ ಹಂಚಿಕೆಯಲ್ಲಿ ಭಾರೀ ಗೊಂದಲವುಂಟಾಗಿದೆ. ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಎಚ್ಡಿಡಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಬೇಡ ಮುದ್ದಹನುಮೇ ಗೌಡರಿಗೆ ಟಿಕೆಟ್ ನೀಡಬೇಕು ಎಂದು ಅಲ್ಲಿನ ಕಾಂಗ್ರೆಸ್ಸಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv