ನವದೆಹಲಿ: ನನ್ನನ್ನು ಕಂಡರೆ ಎಲ್ಲಿ ಅಪ್ಪಿಕೊಳ್ಳುತ್ತಾರೋ ಅಂತಾ ಬಿಜೆಪಿಯವರು ದೂರ ಸರಿಯುತ್ತಿದ್ದಾರೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಅಪ್ಪಿಕೊಂಡ ವಿಚಾರದ ಬಗ್ಗೆ ಈಗಲೂ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಇದೀಗ ಮೋದಿ ಆಲಿಂಗನವನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.
ಕರಣ್ ಥಾಪರ್ ಅವರ ಡೆವಿಲ್ಸ್ ಅಡ್ವೋಕೇಟ್ ಅನ್ ಟೋಲ್ಡ್ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿಯೇ ಉಪಸ್ಥಿತರಿದ್ದ ಅಡ್ವಾಣಿ ಅವರನ್ನು ಉದ್ದೇಶಿಸಿ ರಾಜಕೀಯವಾಗಿ ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು. ಹಾಗಂತ ದ್ವೇಷ ಸಾಧಿಸಲ್ಲ. ಅವರನ್ನ ಅಪ್ಪಿಕೊಂಡು ಪ್ರೀತಿ ತೋರುತ್ತೇನೆ ಅಂತ ಹೇಳುವ ಮೂಲಕ ತಾನು ಪ್ರಧಾನಿ ಮೋದಿಯವರನ್ನು ಅಪ್ಪಿಕೊಂಡ ವಿಚಾರವನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ನಾನು ಮೋದಿಯವರನ್ನು ಅಪ್ಪಿಕೊಂಡ ಬಳಿಕ ಇದೀಗ ಬಿಜೆಪಿಯವರು ನನ್ನ ಕಂಡ್ರೆ ಎಲ್ಲಿ ಅಪ್ಪಿಕೊಳ್ಳುತ್ತಾನೋ ಅಂತ ದೂರ ಸರಿಯುತ್ತಾರೆ ಅಂತ ರಾಹುಲ್ ತಮಾಷೆಯ ಮಾತುಗಳನ್ನಾಡಿದ್ರು.
ಕಳೆದ ಶುಕ್ರವಾರ ಅವಿಶ್ವಾಸ ನಿರ್ಣಯ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರನ್ನು ಸೋಲಿಸಲು ನಿಮ್ಮ ಪಕ್ಷದಲ್ಲಿಯೇ ಷಡ್ಯಂತ್ರ ರಚಿತವಾಗಿದೆ. ಬಿಜೆಪಿ, ಆರ್ ಎಸ್ಎಸ್ ಗಳಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ನನಗೆ ಹಿಂದೂಸ್ತಾನ್, ಭಾರತ, ಹಿಂದೂ, ನನ್ನ ಧರ್ಮದ ಬಗ್ಗೆ ಹೇಳಿಕೊಟ್ಟಿದ್ದೀರಿ. ನಾನು ಈ ವಿಷಯಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳುತ್ತಾ ನೇರವಾಗಿ ಮೋದಿಯವರ ಬಳಿ ತೆರಳಿ ಅಪ್ಪಿಕೊಂಡು ಕೈ ಕುಲುಕಿ ಬರುವ ಮೂಲಕ ಲೋಕಸಭೆಯಲ್ಲಿ ಅಚ್ಚರಿ ಮೂಡಿಸಿದ್ದರು.