-ಮೂರು ಸಂಕಟಗಳಿಗೂ ಒಂದೇ ಬಾಣ ಬಿಡಲು ಕಾಂಗ್ರೆಸ್ ರೆಡಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೂಗು ಕೇಳುತ್ತಿದೆ. ಒಂದು ಕಡೆ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೋರಾಟಗಳು ನಡೆಯುತ್ತಿವೆ. ಇತ್ತ ಬಿಜೆಪಿ ನೇರವಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿದೆ. ಈ ಮೂರೂ ಸಂಕಟಗಳಿಗೂ ಒಂದೇ ಬಾಣ ಪ್ರಯೋಗಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೈ ಪವರ್ ಕಮಿಟಿ ರಚಿಸುವ ಪ್ರಸ್ತಾಪವನ್ನು ಸಿಎಂ ಕುಮಾರಸ್ವಾಮಿ ಮುಂದಿಡಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ನಂಜುಂಡಪ್ಪ ಸಮಿತಿ ಮಾದರಿಯಲ್ಲೇ ಒಂದು ಪವರ್ ಫುಲ್ ಸಮಿತಿ ರಚಿಸೋದು. ಆ ಸಮಿತಿ ಉತ್ತರ ಕರ್ನಾಟಕದ ಸಮಗ್ರ ಅಂದರೆ ಸಾರಿಗೆ, ರೈಲ್ವೆ, ವಿಮಾನಯಾನ, ಕೈಗಾರಿಕೆ, ಕೃಷಿ, ನೀರಾವರಿ ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವುದು ಎಂದು ಹೇಳಲಾಗುತ್ತಿದೆ.
ವರದಿ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಿ ಈವರೆಗೆ ಆದ ತಾರತಮ್ಯವನ್ನು ಸರಿಪಡಿಸೋದು ಕಾಂಗ್ರೆಸ್ ನಾಯಕರ ಉದ್ದೇಶವಾಗಿದೆ. ಆದರೆ ಸಿಎಂ ಎಚ್ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಈ ಪ್ರಸ್ತಾಪಕ್ಕೆ ಮಣೆ ಹಾಕ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಇನ್ನೆರಡು ವಾರದಲ್ಲಿ ಭೇಟಿ ನೀಡಿ ಎರಡು ದಿನ ವಾಸ್ತವ್ಯ ಹೂಡುತ್ತೇನೆ. ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಶ್ರಮಿಸ್ತೇನೆ. ಯಾವುದೇ ಕಾರಣಕ್ಕೂ ಪ್ರತ್ಯೇಕ ಉತ್ತರ ಕರ್ನಾಟಕ ಸಾಧ್ಯವೇ ಇಲ್ಲ. ಉತ್ತರ ಕರ್ನಾಟಕ ಜನತೆ ಮತ ಹಾಕಲಿ ಅಥವಾ ಬಿಡಲಿ, ಅದರ ಅಭಿವೃದ್ಧಿ ನನ್ನ ಜವಾಬ್ದಾರಿ. ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೆಲವೊಂದು ಕಚೇರಿಗಳನ್ನು ಕನ್ನಡಸೌಧಕ್ಕೆ ಸ್ಥಳಾಂತರ ಮಾಡುವುದಾಗಿಯೂ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.