ಬೆಂಗಳೂರು: ನೆಹರೂ ಅವರನ್ನು ದೇಶದ ಚರಿತ್ರೆಯಿಂದ ತೆಗೆದು ಹಾಕುವ ಕೆಲಸ ಆರಂಭವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಇಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಅವರಿಗೆ ನಮಸ್ಕಾರ ಹೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಬೆಂಗಳೂರಿನಲ್ಲಿ ಇಂದು ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ 50 ಸಾವಿರಕ್ಕೂ ಹೆಚ್ಚು ಮಂದಿ ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದವರೆಗೂ ಸ್ವಾತಂತ್ರ್ಯ ನಡಿಗೆ ಕೈಗೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಪಾಲ್ಗೊಂಡಿದ್ದರು.
ಡಿಕೆಶಿ ಮಾತನಾಡಿ, ಅಧಿಕಾರಕ್ಕೆ ಬಂದ ಬಳಿಕ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಬೆಲೆಗಳು ಎಲ್ಲಾ ಏರಿಕೆಯಾಗಿದ್ದು ಯಾರಿಗೂ ನೆಮ್ಮದಿ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸಮಾವೇಶದಲ್ಲಿ ಸಿದ್ದರಾಮಯ್ಯ ಫೀವರ್ ಕಂಡುಬಂತು. ಸ್ವಾಗತ ಭಾಷಣ ವೇಳೆ ಸಿದ್ದರಾಮಯ್ಯ ಹೆಸರೇಳುತ್ತಿದ್ದಂತೆ ಅವರ ಅಭಿಮಾನಿಗಳೆಲ್ಲಾ ಜೋರು ಸದ್ದು ಮಾಡಿದರು. ಸಿದ್ದರಾಮಯ್ಯ ಮಾತನಾಡಿ, ದೇಶದ ಅಭಿವೃದ್ಧಿ, ಸ್ವಾವಲಂಬನೆಗೆ ಕಾಂಗ್ರೆಸ್ ಸರ್ಕಾರಗಳೇ ಕಾರಣ. ನೆಹರೂ ದೇಶವನ್ನು ಕಟ್ಟಿದ್ದಾರೆ ಎಂದು ಹಾಡಿ ಹೊಗಳಿದರು. ಇದನ್ನೂ ಓದಿ: ಯೋಗ್ಯತೆ ಇಲ್ಲದವರು ಈಗ ಸಾವರ್ಕರ್ ಬಗ್ಗೆ ಮಾತನಾಡುತ್ತಾರೆ – ಗುಡುಗಿದ ಬಿ.ಎಲ್ ಸಂತೋಷ್
ಮೈದಾನದ ಬಳಿ ನೂಕುನುಗ್ಗಲು ಉಂಟಾಗಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೆಳಗೆ ಬಿದ್ದ ಪ್ರಸಂಗ ನಡೆಯಿತು. ಕಾಲ್ತುಳಿತಕ್ಕೆ ಒಳಗಾಗುತ್ತಿದ್ದ ಮೋಯ್ಲಿಯವರನ್ನು ಪೊಲೀಸರು ಮತ್ತು ಶಾಸಕ ಶರತ್ ಬಚ್ಚೇಗೌಡ ರಕ್ಷಣೆ ಮಾಡಿದರು. ಮೈದಾನದ ಬಳಿ ನಿಲ್ಲಲು ಜಾಗ ಇಲ್ಲದೇ ಕಾರ್ಯಕರ್ತರು ಅರ್ಧದಲ್ಲಿಯೇ ನಿರ್ಗಮಿಸಿದ್ದು ಕಂಡುಬಂತು.
ಈ ನಡಿಗೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ತಾವು ಏಕೆ ಬಂದಿದ್ದೇವೆ ಎಂಬುದೇ ಗೊತ್ತಿರಲಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಮೆಟ್ರೋ ರೈಲುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸಿದ್ದು ವಿಶೇಷವಾಗಿತ್ತು.