ನವದೆಹಲಿ: ಒಂದು ಕಾಲದಲ್ಲಿ ದೇಶವನ್ನು ಆಳಿದ್ದ ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ. ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಇರುವಂತೆಯೇ ಕಾಂಗ್ರೆಸ್ ಈಗ ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ.
ಹೌದು. ಹಲವು ರಾಜ್ಯಗಳನ್ನು ಸೋತಿರುವ ಬಿಜೆಪಿಯ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಬ್ಲೂಂ ಬರ್ಗ್ ವರದಿ ಮಾಡಿದೆ.
ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿರುವ ಕಚೇರಿಗಳ ದೈನಂದಿನ ಖರ್ಚಿಗೆ ಹಣ ರವಾನಿಸುವುದನ್ನು ಕಾಂಗ್ರೆಸ್ ನಿಲ್ಲಿಸಿದೆ. ಅಷ್ಟೇ ಅಲ್ಲದೇ ರಾಜಕೀಯ ಬೆಳವಣಿಗೆಯ ಸಂದರ್ಭದಲ್ಲಿ ದೆಹಲಿಯ ನಾಯಕರು ಬೇರೆ ಕಡೆ ತೆರಳುವ ಸಂದರ್ಭದಲ್ಲಿ ವಿಮಾನ ಟಿಕೆಟ್ ಖರೀದಿಗೆ ಪರದಾಡುತ್ತಿದೆ. ಇದನ್ನೂ ಓದಿ: 4 ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ 956.77 ಕೋಟಿ ರೂ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು ಕೋಟಿ ಬಂದಿದೆ?
ಈ ವರ್ಷದ ಆರಂಭದಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ನಾಯಕರಿಗೆ ಕಾಂಗ್ರೆಸ್ ವಿಮಾನ ಟಿಕೆಟ್ ಕೊಡಿಸಲು ಸಂನ್ಮೂಲದ ಕೊರತೆ ಅನುಭವಿಸಿತ್ತು. ಪಕ್ಷದ ಕಚೇರಿಗೆ ಅತಿಥಿಗಳು ಆಗಮಿಸಿದರೆ ಅವರಿಗೆ ನೀಡಲಾಗುವ ಚಹಾಕ್ಕೂ ಕತ್ತರಿ ಹಾಕಿದೆ. ಖರ್ಚನ್ನು ಕಡಿಮೆ ಮಾಡಿ ದೇಣಿಗೆಯನ್ನು ಹೆಚ್ಚಿಸಬೇಕು ಎಂದು ಪಕ್ಷ ಈಗಾಗಲೇ ಸೂಚನೆ ನೀಡಿದೆ ಎಂದು ಹೆಸರು ಬಹಿರಂಗಪಡಿಸದ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ ಎಂದು ಬ್ಲೂಂಬರ್ಗ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಆಸ್ತಿ ಎಷ್ಟಿದೆ? ದೇಶದ ಸಿಎಂಗಳ ಆಸ್ತಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಪಕ್ಷಕ್ಕೆ ಸತತ ಸೋಲಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯಮಿಗಳು ದೇಣಿಗೆ ನೀಡಲು ಮುಂದೆ ಬರುತ್ತಿಲ್ಲ. ಖಜಾನೆ ಬರಿದಾಗುತ್ತಿರುವ ಕಾರಣ ಸಂಪನ್ಮೂಲ ಸಂಗ್ರಹಿಸಲು ಕಾಂಗ್ರೆಸ್ ಈಗ ಕ್ರೌಡ್ ಫಂಡಿಂಗ್(ಸಮೂಹ ದೇಣಿಗೆ) ಮೊರೆ ಹೋಗಲು ಮುಂದಾಗಿದೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಪ್ರತಿಕ್ರಿಯಿಸಿದ್ದು, ಈಗ ನಮ್ಮ ಬಳಿ ಹಣವಿಲ್ಲ. ಚುನಾವಣಾ ಬಾಂಡ್ಗಳಿಂದಲೂ ಹಣ ಬರುತ್ತಿಲ್ಲ. ಈ ಕಾರಣಕ್ಕೆ ದೇಣಿಗೆ ಸಂಗ್ರಹ ಮಾಡಲು ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.
2013ರಲ್ಲಿ ಯುಪಿಎ ಸರ್ಕಾರವಿದ್ದಾಗ ದೇಶದ 15 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2014ರಿಂದ ಭಾರತದಲ್ಲಿ ಮೋದಿ- ಅಮಿತ್ ಶಾ ಶಕೆ ಆರಂಭವಾದ ಬಳಿಕ ಕಾಂಗ್ರೆಸ್ ಪಂಜಾಬ್ ಮತ್ತು ಪುದುಚೇರಿಯಲ್ಲಿ ಮಾತ್ರ ಅಧಿಕಾರದಲ್ಲಿದ್ದು, ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?