– ಉಡುಪಿ, ಕಾಪುನಲ್ಲಿ ಬಿಜೆಪಿ ಪರ ಮಹಾರಾಷ್ಟ್ರ ಸಿಎಂ ಪ್ರಚಾರ
ಉಡುಪಿ: ನೇಷನ್ ಫಸ್ಟ್ ಎನ್ನುವ ಪಕ್ಷ ಬಿಜೆಪಿ (BJP). ಕರಪ್ಷನ್ ಫಸ್ಟ್ ಅನ್ನೋ ಪಕ್ಷ ಕಾಂಗ್ರೆಸ್ (Congress) ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ (Udupi) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾನು ಓಡಾಟ ಮಾಡುತ್ತಿದ್ದೇನೆ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ. ಜನ ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಅಭಿವೃದ್ಧಿ, ಕಾಂಗ್ರೆಸ್ನ ಒಡೆದು ಆಳುವ ನೀತಿ ನಡುವೆ ಚುನಾವಣೆ ನಡೆಯುತ್ತಿದೆ: ಬೊಮ್ಮಾಯಿ
ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ. ಮೋದಿಜಿ ಅವರ ರೋಡ್ ಶೋ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರಣ ಸಂಪೂರ್ಣ ಬದಲಾಗಿದೆ. ಬಿಜೆಪಿಗೆ ಪೂರ್ಣ ಬಹುಮತ ಸಿಗುತ್ತೆ ಎಂಬ ವಿಶ್ವಾಸವಿದೆ. ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ ದೇಶದ ಚುನಾವಣೆ. ಇದು ಒಂದು ರಾಜ್ಯಕ್ಕೆ ಸೀಮಿತವಾದ ಚುನಾವಣೆ ಅಲ್ಲ, ಮೋದಿಜಿ ಅವರ ಚುನಾವಣೆ ಎಂದು ತಿಳಿಸಿದರು.
ದೇಶದ ಆರ್ಥಿಕ ವ್ಯವಸ್ಥೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಹೆಮ್ಮೆಯಿಂದ ಭಾರತದ ಹೆಸರು ಹೇಳುತ್ತಿದ್ದಾರೆ. ಜಿ20 ಅಧ್ಯಕ್ಷತೆ ನಮ್ಮ ದೇಶಕ್ಕೆ ಸಿಕ್ಕಿರುವುದು ಗೌರವದ ವಿಚಾರ ಎಂದರು. ಇದನ್ನೂ ಓದಿ: ಮೇ 13ಕ್ಕೆ ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಹೇಗೆ ಪ್ರಹಾರ ಮಾಡುತ್ತೆ ನೋಡಿ: ಭಗವಂತ್ ಖೂಬಾ
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇದ್ದಾಗ ಜನರಿಗೆ ಅನುಕೂಲವಾಗುತ್ತೆ. ನಮ್ಮ ಸರ್ಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಕರಾವಳಿಗರಲ್ಲಿ ಅನೇಕರ ಕರ್ಮಭೂಮಿ ಮಹಾರಾಷ್ಟ್ರವಾಗಿದೆ. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಸರ್ಕಾರಗಳಿದ್ದರೆ ವಿಕಾಸಕ್ಕೆ ಹಿನ್ನಡೆಯಾಗುತ್ತೆ. ಬಿಜೆಪಿ ಜೊತೆ ನಮ್ಮ ಸಹಭಾಗಿತ್ವ ಇರುವ ಕಾರಣ ಬಂದಿದ್ದೇನೆ. ನಾವು ಸ್ನೇಹ ಮಾಡುತ್ತೇವೆ ಮತ್ತು ಅದನ್ನು ನಿಭಾಯಿಸುತ್ತೇವೆ. ಅಭಿವೃದ್ಧಿ ಈ ಚುನಾವಣೆಯ ಪ್ರಮುಖ ವಿಷಯ. ಕಾಂಗ್ರೆಸಿಗರು ಮೋದಿಜಿ ಅವರ ಬಗ್ಗೆ ಅಪಶಬ್ದ ಮಾತನಾಡುತ್ತಿದ್ದಾರೆ. ವಿಷ ಸರ್ಪ ಎಂದು ಕರೆದಿದ್ದಾರೆ. ಗುಜರಾತ್ ಚುನಾವಣೆ ಕಾಲದಲ್ಲೂ ಮೌತ್ ಕ ಸೌದಾಗರ್, ಚೌಕಿದಾರ್ ಎಂದು ಹೇಳಿದರು. ಮೋದಿ ಯಾವುದಕ್ಕೂ ಸೇಡು ತೀರಿಸಿಕೊಂಡಿಲ್ಲ. ಜನರು ಸೇಡು ತೀರಿಸಿಕೊಂಡು ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಮೋದಿಜಿಗೆ ಮಾಡಿದ ಅವಮಾನ ಸಹಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್
ಬಜರಂಗದಳ ಒಂದು ದೇಶಭಕ್ತ ಸಂಘಟನೆ. ಆರ್ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ರಾಷ್ಟ್ರಕ್ಕೆ ಸಂಕಟ ಬಂದಾಗ ತಮ್ಮ ಪ್ರಾಣ ಒತ್ತೆಗಿಟ್ಟು ಕೆಲಸ ಮಾಡುತ್ತಾರೆ. ಬಜರಂಗದಳ ಸಂಘಟನೆಯ ಬ್ಯಾನ್ ಹೇಗೆ ಮಾಡುತ್ತೀರಿ? ಭಜರಂಗಿಯ ಅವಮಾನ ಮತ್ತು ಮೋದಿಜಿಯ ಅವಮಾನಕೆ ತಕ್ಕ ಉತ್ತರ ಸಿಗುತ್ತದೆ ಎಂದು ಕಾಂಗ್ರೆಸ್ಗೆ ಎಚ್ಚರಿಸಿದರು.