ನವದೆಹಲಿ: ಸಂಸದ ಡಿ.ಕೆ.ಸುರೇಶ್ ಅವರಿಗೆ ಕಳೆದ 5 ದಿನಗಳಿಂದ ಫುಲ್ ಡ್ರಿಲ್ ಮಾಡಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೊಂಚ ರಿಲೀಫ್ ನೀಡಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಕ್ರಮ ಹಣಕಾಸು ವ್ಯವಹಾರ ಪ್ರಕರಣದ ಸಂಬಂಧ ಸಹೋದರ ಡಿ.ಕೆ.ಸುರೇಶ್ ಶುಕ್ರವಾರ ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭಿಸಿದ ಇಡಿ ಅಧಿಕಾರಿಗಳು ಸಂಜೆ 7 ಗಂಟೆ ಸುಮಾರಿಗೆ ವಿಚಾರಣೆ ಅಂತ್ಯಗೊಳಿಸಿದರು. ನಾಳೆ ಮತ್ತೆ ವಿಚಾರಣೆ ಹಾಜರಾಗಬೇಕು ಎಂದು ಇಡಿ ಅಧಿಕಾರಿಗಳು ಯಾವುದೇ ಸಮನ್ಸ್ ಜಾರಿ ಮಾಡಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಅವರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದರು, ಇಡಿ ಅಧಿಕಾರಿಗಳು ಸಮನ್ಸ್ ಕೊಡುತ್ತೇವೆ. ಆಗ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ. ನಾನು ವಿಚಾರಣೆಗೆ ಹಾಜರಾಗುತ್ತೇನೆ ಅಂತ ಹೇಳಿದ್ದೇನೆ. ಆದರೆ ವಿಚಾರಣೆಗೆ ಯಾವಾಗ ಹಾಜರಾಗಬೇಕು ಎಂದು ಸಮಯ ತಿಳಿಸಿಲ್ಲ ಎಂದರು.
ಬೇರೆ ಇನ್ನೇನಾದ್ರು ಇದೆಯಾ? ನೀವು ಹೇಳಿದ್ರಿ ಅಂತ ಸ್ವಲ್ಪ ಬೇಗ ಬಿಟ್ಟಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ನಗುತ್ತಲೇ ಕಿಡಿಕಾರಿದರು. ಬಳಿಕ ಸ್ವಲ್ಪ ಗರಂ ಆದ ಸಂಸದರು, ನೀವೇ ಏನೇನೋ ಮಾಹಿತಿ ಕೊಡುತ್ತೀರಿ. ಅದನ್ನೆಲ್ಲಾ ಅವರು ಕೇಳಬೇಕಲ್ವಾ? ಇದೊಳ್ಳೆ ಕಥೆಯಾಯ್ತಲ್ಲಾ. ನಿಮಗಿರುವಷ್ಟು ಮಾಹಿತಿ ನನಗಿಲ್ಲ ಎಂದು ಹೇಳಿದರು.