ಬೆಂಗಳೂರು: `ಆಪರೇಷನ್ ಕಮಲ’ ಭೀತಿಯಲ್ಲಿ ರಾತ್ರೋರಾತ್ರಿ ರೆಸಾರ್ಟ್ ಸೇರಿಕೊಂಡಿರುವ ಕೈ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪಾಠ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ವಿಧಾನಸೌಧದಿಂದ ಸೀದಾ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ಅವರ ತಮ್ಮ ಸಂಸದ ಡಿಕೆ ಸುರೇಶ್ಗೆ ಕೈ ಶಾಸಕರನ್ನು ಕಾಯುವ ಹೊಣೆಯನ್ನು ಕಾಂಗ್ರೆಸ್ ಒಪ್ಪಿಸಿದೆ. ಶುಕ್ರವಾರ ರಾತ್ರಿ ಅತೃಪ್ತ ಶಾಸಕರನ್ನು ಕೂರಿಸಿಕೊಂಡು ಊಟದ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪಾಠವನ್ನು ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪಾಠದಲ್ಲಿ ಏನಿತ್ತು?
ನಾವು ಹೇಳುವ ತನಕ ನೀವು ರೆಸಾರ್ಟ್ ನಲ್ಲೇ ಇರಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಒಂದು ವೇಳೆ ನೀವು ಈಗ ಇಲ್ಲಿಂದ ಹೊರಗೆ ಹೋದರೆ ಮತ್ತೆ ಪಕ್ಷಕ್ಕೆ ಕಷ್ಟ ಆಗುತ್ತದೆ. ಹೀಗಾಗಿ ಆಪರೇಷನ್ ಕಮಲ ತಣ್ಣಗಾಗುವರೆಗೆ ರೆಸಾರ್ಟ್ ನಲ್ಲೇ ಉಳಿದುಕೊಳ್ಳಬೇಕು. ನಮ್ಮ ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿಯವರು ಯತ್ನಿಸಿದ್ದಾರೆ. ಅತೃಪ್ತ ಶಾಸಕರಿಗೆ ಬಿಜೆಪಿಯವರು ಕೋಟಿ-ಕೋಟಿ ಆಮಿಷ ಒಡ್ಡಿ ಸೆಳೆಯಲು ಯತ್ನಿಸಿದ್ದಾರೆ. ಆದರೂ ಆಮಿಷಕ್ಕೆ ಒಳಗಾಗದೇ ನೀವೆಲ್ಲರೂ ಪಕ್ಷದ ಜೊತೆಗೆ ಇರುವುದಕ್ಕೆ ಖುಷಿಯಾಗುತ್ತಿದೆ.
ಭಾನುವಾರ ಮುಕ್ತಾಯ?: ಬಿಜೆಪಿ ಶಾಸಕರು ಶನಿವಾರವೇ ಬೆಂಗಳೂರಿಗೆ ಬಂದರೂ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇವತ್ತಿಗೆ ಮುಗಿಯುವುದಿಲ್ಲ. ಬೆಳಗ್ಗೆ 11 ಗಂಟೆ ನಂತರ ಶಾಸಕರ ಜೊತೆ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಎಲ್ಲಾ ಬಿಜೆಪಿ ಶಾಸಕರು ಇಂದು ಬೆಂಗಳೂರಿಗೆ ತಲುಪಿದ್ದು ಖಚಿತವಾದರೆ, ಭಾನುವಾರ ಮಧ್ಯಾಹ್ನದ ಬಳಿಕ ಕಾಂಗ್ರೆಸ್ ಶಾಸಕರು ರೆಸಾರ್ಟ್ ಹೊರಡುವ ಸಾಧ್ಯತೆಯಿದೆ.
ಬಹುತೇಕ ಎಲ್ಲಾ ಸಚಿವರಿಗೆ ರೆಸಾರ್ಟ್ ನಲ್ಲೇ ಇರಬೇಕು ಎಂಬ ಯಾವುದೇ ಷರತ್ತು ಇಲ್ಲ. ಬೆಂಗಳೂರಿನ ಹೆಚ್ಚಿನ ಶಾಸಕರು ರಾತ್ರಿಯೇ ತಮ್ಮ ತಮ್ಮ ನಿವಾಸಕ್ಕೆ ತೆರಾಳಿದ್ದಾರೆ. ಸದ್ಯ ಈಗ 48 ಶಾಸಕರು ಮಾತ್ರ ಈಗಲ್ ಟನ್ ರೆಸಾರ್ಟ್ ನಲ್ಲಿದ್ದು, ಉಳಿದ ಶಾಸಕ ಹಾಗೂ ಸಚಿವರು ಬೆಳಗ್ಗಿನ ಸಭೆಗೆ ರೆಸಾರ್ಟ್ ಗೆ ಆಗಮಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv