ಬೆಂಗಳೂರು: ಕಾಂಗ್ರೆಸ್ ಪಕ್ಷದ ಇನ್ನೂ ಕೆಲ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಲೇ ಇದ್ದು, ಹೆದರಿಸಿ, ಬೆದರಿಸಿ ಶಾಸಕರ ರಾಜೀನಾಮೆ ಕೊಡಿಸುವ ಪ್ರಯತ್ನ ಮುಂದುವರಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರು ಅವರ ಕಡೆ ಹೋಗುವುದಿಲ್ಲ. ಆದರೆ ಪುನಃ ಬಿಜೆಪಿಯಿಂದ ಶಾಸಕರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ನಮ್ಮ ಶಾಸಕರನ್ನ ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಆಸ್ಥಿಗೊಳಿಸುವ ಪ್ರಯತ್ನ ನಡೆದಿದೆ. ಆದರೆ ನಮ್ಮ ಶಾಸಕರು ಅಂಜಿಕೆ, ಹೆದರಿಕೆ ಒಳಗಾಗಬಾರದು. ಕ್ಷೇತ್ರದ ಜನತೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ, ಅತೃಪ್ತ ಶಾಸಕರು ಕೂಡ ವಾಪಸ್ ಬಂದು ಕೈಜೋಡಿಸಬೇಕು. ನಮ್ಮ ಶಾಸಕ ರಹೀಂಖಾನ್ಗೂ ಆಮಿಷ ನೀಡಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ರಾಜ್ಯಪಾಲರು ಇದರ ಬಗ್ಗೆ ಯಾಕೆ ಗಮನ ಹರಿಸಬಾರದು. ರಾಜ್ಯಪಾಲರನ್ನೂ ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದರು.