ಬಳ್ಳಾರಿ: ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್ ನಲ್ಲಿ ಅಸಮಾಧಾನದ ಹೊಗೆ ಕಾಣುತ್ತಿದೆ. ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತ ಸಚಿವ ಸ್ಥಾನ ಸಿಗದ ಶಾಸಕರೊಬ್ಬರು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಜೊತೆ ಕಾಣಿಸಿಕೊಳ್ಳುವ ಮೂಲಕ ಕೈ ಅಂಗಳದಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ.
ಹೊಸಪೇಟೆ(ವಿಜಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಹಂಪಿಯಲ್ಲಿ ಕೇಂದ್ರ ಸಚಿವರ ಜೊತೆ ಕಾಣಿಸಿಕೊಂಡಿದ್ದಾರೆ. ಪಿಯೂಶ್ ಗೋಯಲ್ ಅವರು ಹಂಪಿ ವಿರೂಪಾಕ್ಷೇಶ್ವರ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಗೋಯಲ್ ರನ್ನು ಭೇಟಿಯಾದ ಆನಂದ್ ಸಿಂಗ್ ದರ್ಶನ ಪಡೆದು ಮರಳಿ ಬರೋವೆರಗೂ ಜೊತೆಯಲ್ಲಿದ್ದರು. ಸಚಿವರನ್ನು ಕಮಲಾಪುರದ ರಜಪೂತ ಕೋಟೆಗೆ ಕರೆದುಕೊಂಡು ಹೋಗಿ ಸತ್ಕರಿಸಿದ್ದಾರೆ.
ಈ ವೇಳೆ ಆನಂದ್ ಸಿಂಗ್ ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವನ್ನು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲ ಬಿಜೆಪಿ ಪಕ್ಷದವರಾದ ಅನಂದ್ ಸಿಂಗ್ 2018ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾಗಿದ್ದರು. ಮೈತ್ರಿ ಸರ್ಕಾರದ ಸಂಪುಟ ರಚನೆಯಲ್ಲಿಯೂ ಆನಂದ್ ಸಿಂಗ್ ಹೆಸರು ಕೇಳಿ ಬಂದಿದ್ದರೂ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಸಂಪುಟ ಪುನಾರಚನೆ ವೇಳೆಯೂ ಕೊನೆ ಕ್ಷಣದಲ್ಲಿ ಆನಂದ್ ಸಿಂಗ್ ಹೆಸರನ್ನು ಕೈ ಬಿಡಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv