-ಸಭೆಗೆ ಓಡೋಡಿ ಬಂದ ಶಾಸಕ ನಾರಾಯಣ್ ರಾವ್
ಬೆಂಗಳೂರು: ಶಾಸಕಾಂಗ ಸಭೆಗೆ ಹಾಜರಾಗಿರುವ ಎಲ್ಲ ಶಾಸಕರನ್ನು ರೆಸಾರ್ಟ್ ನಲ್ಲಿರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೆಂಗಳೂರು ಹತ್ತಿರದ ಯಾವುದಾದರೂ ರೆಸಾರ್ಟ್ ನಲ್ಲಿ ಆಪರೇಷನ್ ಕಮಲ ತಣ್ಣಗಾಗುವರೆಗು ಇರಿಸಲು ನಾಯಕರು ಚಿಂತನೆ ನಡೆಸಿದ್ದಾರಂತೆ.
ಬಿಜೆಪಿ ಈಗಾಗಲೇ ತನ್ನ ಬಹುತೇಕ ಶಾಸಕರನ್ನು ಹರಿಯಾಣದ ಗುರುಗ್ರಾಮ ರೆಸಾರ್ಟ್ ನಲ್ಲಿ ಇರಿಸಿದೆ. ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯ ಕರೆದಿರುವ ಸಭೆಗೆ ನಾಲ್ವರು ಹೊರತುಪಡಿಸಿ ಎಲ್ಲರು ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ನಾಗೇಂದ್ರ ಮಾತ್ರ ಸಭೆ ಬರದಿರುವುದು ಹಿರಿಯ ನಾಯಕರ ಕೋಪಕ್ಕೆ ಕಾರಣವಾಗಿದೆ. ಸಭೆಗೆ ಹಾಜರಾದ ಎಲ್ಲ ಶಾಸಕರೊಂದಿಗೆ ಸಚಿವ ಸ್ಥಾನ, ಅತೃಪ್ತ ಶಾಸಕರ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತಾಗಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಹೈದರಾಬಾದ್ ನಲ್ಲಿದ್ದ ಬಸವ ಕಲ್ಯಾಣ ಶಾಸಕ ನಾರಾಯಣ್ ರಾವ್ ಸಭೆಗೆ ಓಡೋಡಿ ಬಂದಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್), ನಾಗೇಂದ್ರ (ಕಂಪ್ಲಿ), ಮಹೇಶ್ ಕುಮಟಳ್ಳಿ (ಅಥಣಿ) ಮತ್ತು ಉಮೇಶ್ ಜಾಧವ್ (ಚಿಂಚೋಳಿ) ಈ ಎಲ್ಲ ಶಾಸಕರ ಅನುಪಸ್ಥಿತಿಯಲ್ಲಿಯೇ ಸಭೆ ಆರಂಭವಾಯ್ತು. ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಭೀಮಾ ನಾಯ್ಕ್ (ಹಗರಿಬೊಮ್ಮನಹಳ್ಳಿ), ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಪ್ರತಾಪಗೌಡ ಪಾಟೀಲ್ (ಮಸ್ಕಿ), ಶ್ರೀಮಂತ್ ಪಾಟೀಲ್ (ಕಾಗವಾಡ) ಮತ್ತು ಆನಂದ್ ಸಿಂಗ್ (ವಿಜಯನಗರ, ಹೊಸಪೇಟೆ) ಶಾಸಕರು ಸಭೆಗೆ ಹಾಜರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv