ಚಿಕ್ಕಮಗಳೂರು: ರಾಜ್ಯಾದ್ಯಂತ ಈಗಾಗಲೇ 2023ರ ವಿಧಾನಸಭೆ ಚುನಾವಣೆಯ ಚಟುವಟಿಕೆಗಳು ಗರಿಗೆದರಿದೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ರಾಜಕೀಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವೆ ಮೋಟಮ್ಮ (Motamma) ಪುತ್ರಿ ನಯನಾ ಮೋಟಮ್ಮಗೆ (Nayana Motamma) ಟಿಕೆಟ್ ಬೇಡವೇ-ಬೇಡ ಎಂದು ಕಾಂಗ್ರೆಸ್ (Congress) ಕಾರ್ಯಕರ್ತರು ಬಹಿರಂಗ ಸಭೆ ನಡೆಸಿದ್ದಾರೆ.
ಚಿಕ್ಕಮಗಳೂರು (Chikkamagaluru) ತಾಲೂಕಿನ ಮೂಡಿಗೆರೆ ಮತಕ್ಷೇತ್ರ ವ್ಯಾಪ್ತಿಯ ವಸ್ತಾರೆ ಹೋಬಳಿಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ನಯನಾಗೆ ಟಿಕೆಟ್ ನೀಡಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಲು ನಿರ್ಧರಿಸಿದ್ದಾರೆ. ನಯನಾಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೋಲು ಖಚಿತ. ಕ್ಷೇತ್ರದ ಜನ ನಯನಾ ಅವರನ್ನು ಒಪ್ಪುತ್ತಿಲ್ಲ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ನಯನಾಗೆ ಟಿಕೆಟ್ ನೀಡಲು ವಿರೋಧಿಸಿದ್ದಾರೆ.
ಈಗಾಗಲೇ ಮೋಟಮ್ಮ ಐದು ಬಾರಿ ಸೋಲು ಕಂಡಿದ್ದಾರೆ. ಈ ಮಧ್ಯೆ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈಗ ಅವರ ಮಗಳಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷ ಸೋಲುವುದು ಗ್ಯಾರಂಟಿ. ಹಾಗಾಗಿ, ಸ್ಥಳೀಯರು ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿ ನಯನಾ ವಿರುದ್ಧ ಬಹಿರಂಗ ಸಭೆ ನಡೆಸುತ್ತಿದ್ದಾರೆ.
ಕಳೆದೊಂದು ವಾರದ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆಯಲ್ಲೂ ಸಭೆ ಸೇರಿ ಅಸಮಾಧಾನ ಹೊರಹಾಕಿದ್ದರು. ಮುಂದಿನ ವಾರದಲ್ಲಿ ಗೋಣಿಬೀಡು ಹೋಬಳಿಯಲ್ಲೂ ಸಭೆ ಸೇರುವುದಾಗಿ ತೀರ್ಮಾನಿಸಿದ್ದಾರೆ. ನಯನಾ ವಿರುದ್ಧ ಕಾಂಗ್ರೆಸ್ ಹೋಬಳಿಗಳಿಗೆ ಹೋಗಿ ಸಭೆ ನಡೆಸಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೊಸ ಮುಖಕ್ಕೆ ಮಣೆ ಹಾಕುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ
ಕೇವಲ ಕಾಂಗ್ರೆಸ್ ಪಕ್ಷವಷ್ಟೇ ಅಲ್ಲದೆ ಜೆಡಿಎಸ್ ಹಾಗೂ ಬಿಜೆಪಿಯಲ್ಲೂ (BJP) ಟಿಕೆಟ್ ಲಾಬಿ ಜೋರಾಗಿದೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ, ಅವರು ಕಾಂಗ್ರೆಸ್ ಸೇರುತ್ತಾರೆ, ಜೆಡಿಎಸ್ (JDS) ಸೇರುತ್ತಾರೆ ಎಂಬ ಗಾಳಿ ಸುದ್ದಿ ಕೂಡ ಹರಿದಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ನಲ್ಲಿ ಮಾತ್ರ ಮೋಟಮ್ಮ ಮಗಳಿಗೆ ಖಡಾ ಖಂಡಿತವಾಗಿ ಟಿಕೆಟ್ ಬೇಡವೇ ಬೇಡ ಕಾಂಗ್ರೆಸ್ ಕಾರ್ಯಕರ್ತರೇ ಹೋಬಳಿ-ಹೋಬಳಿಯಲ್ಲಿ ಅಭಿಯಾನದ ರೀತಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಂಧದ ಮರ ಕಳವು ಮಾಡಲು ಚಿಕನ್ ಪೀಸ್ನಲ್ಲಿ ವಿಷವಿಟ್ಟು ಶ್ವಾನಗಳನ್ನು ಕೊಂದ್ರು