ಶಿವಮೊಗ್ಗ: ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಿಂದಲೇ ಸೋಲನುಭವಿಸಿದ ಅಭ್ಯರ್ಥಿ ರಾಜಶೇಖರ್ ಪಾಲಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಪಾಲಿಕೆಯಲ್ಲಿ 13 ಕಾಂಗ್ರೆಸ್ ಕಾರ್ಪೊರೇಟರ್ ಗಳು ಇದ್ದರೂ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೈ ಅಭ್ಯರ್ಥಿ ರಾಜಶೇಖರ್ ಗೆ ಬಿದ್ದಿದ್ದು ಅವರದ್ದೊಂದೇ ಮತ. ಹೀಗಾಗಿ ಕಾಂಗ್ರೆಸ್ ನಾಯಕರು ನೈತಿಕತೆ ಕಳೆದುಕೊಂಡಿದ್ದಾರೆ ಎಂದು ರಾಜಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಜೊತೆ ಕಾಂಗ್ರೆಸ್ ಸದಸ್ಯರು ಕೈಜೋಡಿಸಿದ್ದು, ಜೆಡಿಎಸ್ ನ ನಾಗರಾಜ್ ಕಂಕಾರಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಆಗಿ ಕಾಂಗ್ರೆಸ್ ನ ವಿಜಯಲಕ್ಷ್ಮಿ ಪಾಟೀಲ್ ಆಯ್ಕೆಯಾಗಿದ್ದಾರೆ.
ಪಕ್ಷದ ಮೇಯರ್ ಅಭ್ಯರ್ಥಿಗೆ ಕಾಂಗ್ರೆಸ್ ಸದಸ್ಯರೇ ಮತ ನೀಡಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಸನ್ನ ಕುಮಾರ್ ಹಾಗೂ ಎಂಎಲ್ಸಿ ಪ್ರಸನ್ನ ಕುಮಾರ್ ಕೂಡ ಪಾಲ್ಗೊಂಡಿದ್ದರು. ಇದೂವರೆಗೂ ಜೆಡಿಎಸ್ ಗೆ ಮೇಯರ್ ಸ್ಥಾನ, ಬಿಜೆಪಿಗೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಿಕೊಂಡು ಅಧಿಕಾರ ಚಲಾಯಿಸಿದ್ದರು. ಈ ಬಾರಿ ಜೆಡಿಎಸ್ ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ಮೂಲಕ ಮತ್ತೊಮ್ಮೆ ಮೇಯರ್ ಸ್ಥಾನ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.