ಬೆಂಗಳೂರು: ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈತ್ರಿ ಸರ್ಕಾರ ಸ್ಪೀಕರ್ ಅವರ ಕ್ರಮದಿಂದ ಅತೃಪ್ತರ ಮನವೊಲಿಸಲು ಸಮಯ ಸಿಕ್ಕಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮೈತ್ರಿ ಪಕ್ಷದ ನಾಯಕರ ಜೊತೆ ಸಭೆ ನಡೆಯಲಿದ್ದು, ಜೆಡಿಎಸ್ ನಾಯಕರ ಜೊತೆ ಸಭೆಗೂ ಮುನ್ನ ಕಾಂಗ್ರೆಸ್ ನಾಯಕರ ಪ್ರತ್ಯೇಕ ಸಭೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದೆ. ಕೆಕೆ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದ್ದು, ಆ ಬಳಿಕ ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಯಲಿದೆ.
Congress leaders Ghulam Nabi Azad and BK Hariprasad to go to Bengaluru today. #Karnataka (file pics) pic.twitter.com/PlEAR1J7U6
— ANI (@ANI) July 9, 2019
ಬಂಡಾಯ ಶಾಸಕರು ತಮ್ಮ ನಿಲುವು ಸ್ಪಷ್ಟ ಎಂದು ಈಗಾಗಲೇ ಹಲವು ಬಾರಿ ಹೇಳಿದ್ದು, ಸದ್ಯ ಅವರು ಮತ್ತೆ ಬೆಂಗಳೂರಿಗೆ ಆಗಮಿಸುವ ಅವಕಾಶ ಇರುವುದರಿಂದ ಮತ್ತೆ ಅವರ ಮನವೊಲಿಕೆ ಕಾರ್ಯವನ್ನು ನಡೆಸುತ್ತಾರಾ ಎಂಬ ಕುತೂಹಲ ಮೂಡಿದೆ. ಅಲ್ಲದೇ ಸ್ಪೀಕರ್ ಅವರು ಭೇಟಿಗೆ ಸಮಯ ನೀಡಿರುವುದರಿಂದ 2ನೇ ಬಾರಿಗೆ ನಿಯಮಗಳಿಗೆ ಅನುಗುಣವಾಗಿ ರಾಜೀನಾಮೆ ಸಲ್ಲಿಸುವ ಅವಕಾಶ ಇದೆ. ಈ ಸಮಯದಲ್ಲಿ ಅತೃಪ್ತ ಶಾಸಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದರೆ ಗುಲಾಂ ನಬಿ ಅಜಾದ್ ಅವರು 3 ದಿನಗಳ ಕಾಲ ಬೆಂಗಳೂರಿನಲ್ಲೇ ಇರಲಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಗುಲಾಂ ನಬಿ ಅಜಾದ್ ಅವರು ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರ ಮನವೊಲಿಸುವ ಅವಕಾಶವಿದೆ. ಏಕೆಂದರೆ ರಾಜೀನಾಮೆ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ರಾಮಲಿಂಗಾರೆಡ್ಡಿ ಅವರು, ನಾನು ಸ್ವ ಇಚ್ಛೆಯಿಂದ ತೀರ್ಮಾನ ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಸ್ಪೀಕರ್ ಕೇಳಿದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.