ಬಳ್ಳಾರಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕರೊಬ್ಬರ ಮಗನ ಕಾರು-ಬಾರು ಬಲು ಜೋರಾಗಿದ್ದು, ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.
ಸಂಡೂರು, ಹಗರಿಬೊಮ್ಮನಹಳ್ಳಿಯಲ್ಲಿ ವ್ಹೀಲಿಂಗ್ ಕ್ರೇಜ್ ಮಿತಿಮೀರಿದ್ದು, ರಾಜ್ಯದ ಹಲವೆಡೆಯೂ ಕಾರು-ಬೈಕ್ ವ್ಹೀಲಿಂಗ್ ಮಾಡುವುದನ್ನು ಕೈ ನಾಯಕನ ಮಗ ಹಫೀಜ್ ಶೇಖ್ ಹವ್ಯಾಸವಾಗಿಸಿಕೊಂಡಿದ್ದಾನೆ. ನಡು ರಸ್ತೆಯಲ್ಲಿಯೇ ಮನಬಂದಂತೆ ಗಾಡಿ ಚಲಾಯಿಸಿ, ವ್ಹೀಲಿಂಗ್ ಮಾಡಿದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ವ್ಹೀಲಿಂಗ್ ಮಾಡುವುದು ಕಾನೂನು ಬಾಹಿರವಾಗಿದ್ದರೂ ಈ ಕುರಿತು ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ.
ಅಪಾಯವನ್ನು ಲೆಕ್ಕಿಸದೆ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ, ಈ ಬಾರಿ ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಿರಾಜ್ ಶೇಖ್ ಮಗ ಹಫೀಜ್ ಶೇಖ್, ವ್ಹೀಲಿಂಗ್ ಮಾಡಿದ್ದಾನೆ. ಹಫೀಜ್ ಶೇಖ್ ಸಹ ಸಂಡೂರು ಪುರಸಭೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದನು. ಆದರೆ ಇದೀಗ ಸಾರ್ವಜನಿಕ ಸ್ಥಳದಲ್ಲಿಯೇ ಅಪಾಯಕಾರಿಯಾಗಿ ಬೈಕ್-ಕಾರ್ ವ್ಹೀಲಿಂಗ್ ಮಾಡುತ್ತಿದ್ದು, ಇವರು ರೋಡಿಗಿಳಿದಾಗ ವಾಹನ ಸವಾರರು ಭಯದಿಂದಲೇ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.
ಹಫೀಜ್ ಶೇಖ್ ಮಿತಿ ಮೀರಿದ ವೇಗದಲ್ಲಿ ಬೈಕ್, ಕಾರು ಚಲಾಯಿಸುತ್ತಾನೆ. ಅಲ್ಲದೆ ರಾತ್ರಿ ವೇಳೆ ಡಿವೈಡರ್ ಮೇಲೆ ಕಾರು ಹತ್ತಿಸಿ, ಒನ್ ಸೈಡ್ ಕಾರ್ ವ್ಹೀಲಿಂಗ್ ಮಾಡುತ್ತಾನೆ. ಯಾವ ಕಾಂಪಿಟೇಷನ್ಗೂ ಕಮ್ಮಿಯಿಲ್ಲದಂತೆ ಕಾರನ್ನು ಹಾರಿಸುತ್ತಾನೆ. ವ್ಹೀಲಿಂಗ್ ಮಾಡಿದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಇದನ್ನು ಕಂಡ ಇತರೆ ಯುವಕರು ಕೂಡ ವ್ಹೀಲಿಂಗ್ ಚಟಕ್ಕೆ ಮುಂದಾಗುತ್ತಿದ್ದಾರೆ.
ವ್ಹೀಲಿಂಗ್ ಮಾತ್ರವಲ್ಲದೆ ಗನ್ ಪ್ರದರ್ಶನ ಮಾಡಿ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇಷ್ಟೆಲ್ಲ ನಡೆದಿದ್ದರು ಸಹ ಬಳ್ಳಾರಿ ಪೊಲೀಸರು ಎಚ್ಚೆತ್ತುಕೊಳ್ಳದಿರುವುದು ಸರ್ವಾಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.