ಬೆಂಗಳೂರು: ನಿಮಗೆ ಮಾನವೀಯತೆ ಇದ್ದರೆ ಪರೇಶ್ ಮೇಸ್ತ ಕುಟುಂಬದ ಕ್ಷಮೆ ಕೇಳಿ ಎಂದು ಭಾರತೀಯ ಜನತಾ ಪಾರ್ಟಿ (BJP) ವಿರುದ್ಧ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಕೋಮುವಿಷ ಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪರೇಶ್ ಮೇಸ್ತ (Paresh Mestha) ಪ್ರಕರಣದಲ್ಲಿ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ಹೇಳುತ್ತೆ. ಪರೇಶ್ ಮೇಸ್ತ ಕೊಲೆ ನಡೆದಿಲ್ಲ, ಬದಲಾಗಿ ಆಕಸ್ಮಿಕ ಅಥವಾ ನೀರಿಗೆ ಮುಳುಗಿದ ಕಾರಣದಿಂದ ಸಾವು ಆಗಿದೆ ಎಂದು ವರದಿಯಲ್ಲಿದೆ. ಕೋಮು ಕಾರಣದಿಂದಾಗಿ ನಡೆದ ಹತ್ಯೆ ಇದಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ ಎಂದರು. ಇದನ್ನೂ ಓದಿ: ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ
ಸಿಬಿಐ (CBI) ಕೇಂದ್ರ ಸರ್ಕಾರದ ಅಧೀನದಲ್ಲಿ ಇದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಹಾಗಿದ್ದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಕೋಮುವಿಷ ಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಶೋಭಾ ಕರಂದ್ಲಾಜೆ ಪರೇಶ್ ಮೇಸ್ತ ಸಾವಿಗೆ ಜಿಹಾದಿ ಶಕ್ತಿಗಳು ಕಾರಣ ಎಂದಿದ್ದರು. ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದಿದ್ದರು. ಪರೇಶ್ ಮೇಸ್ತ ಕೈ ಕಡಿಯಲಾಗಿದೆ ಎಂದು ಹೇಳಿದ್ದರು. ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಇನ್ನೆಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಬೇಕು ಎಂದು ಪ್ರಶ್ನೆ ಮಾಡಿದ್ದರು ಎಂದು ಹೇಳಿದರು.
ಸಿಬಿಐ ವರದಿಯಲ್ಲಿ ಪರೇಶ್ ಮೇಸ್ತ ಕೈ ಮೇಲೆ ಇರುವ ಶಿವಾಜಿ ಟ್ಯಾಟೋ ಹಾಗೆ ಇದೆ. ಹಾಗಿದ್ದರೂ ಕೈ ಕಡಿಯಲಾಗಿದೆ, ಬಿಸಿ ಎಣ್ಣೆ ಕಣ್ಣಿಗೆ ಹಾಕಲಾಗಿದೆ ಎಂದೆಲ್ಲಾ ಆರೋಪ ಮಾಡಿದ್ದರು. ಹಾಗಾದರೆ ಸಿಬಿಐ ತನಿಖೆ ಆಗುವಾಗ ಈ ಘಟನೆಯ ಬಗ್ಗೆ ಏಕೆ ಸಾಕ್ಷಿ ನೀಡಿಲ್ಲ..? ಹಿಂದೂ ಕಾರ್ಯಕರ್ತರ ಮೇಲಿನ ಕಾಳಜಿ ಇದೇನಾ..? ಶವದ ಮೇಲೆ ರಾಜಕೀಯ ಮಾಡಲು ನಾಚಿಕೆ ಆಗಲ್ವಾ..? ಮಾನವೀಯತೆಯ ಇದ್ದರೆ ಪರೇಶ್ ಮೇಸ್ತ ಕುಟುಂಬದ ಕ್ಷಮೆ ಕೇಳಿ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. ಇದನ್ನೂ ಓದಿ: ನನಗೆ AAP ತೊರೆಯುವಂತೆ ಒತ್ತಡ ಹೇರಿದ್ದಾರೆ – ಸಿಸೋಡಿಯಾ ಆರೋಪ, CBI ಪ್ರತಿಕ್ರಿಯೆ
ಶೋಭಾ, ಈಶ್ವರಪ್ಪ, ಸಿಟಿ ರವಿ, ಅನಂತ್ ಕುಮಾರ್ ಈ ಪ್ರಕರಣದಲ್ಲಿ ತಪ್ಪು ಮಾಹಿತಿ ನೀಡಿ, ದಾರಿ ತಪ್ಪಿಸಿ ರಾಜ್ಯವನ್ನು ಬೆಂಕಿ ಹಚ್ಚಲು ಕಾರಣರಾಗಿದ್ದರು. ಇವರ ಮೇಲೆ ಕೇಸ್ ಬುಕ್ ಮಾಡಲು ಸಿಎಂಗೆ ತಾಕತ್ತು ಇದ್ಯಾ…?. 15 ದಿನಗಳ ಒಳಗೆ ಕೇಸ್ ದಾಖಲು ಮಾಡಬೇಕು. ರಾಜ್ಯ ಸರ್ಕಾರಕ್ಕೆ 15 ದಿನ ಸಮಯ ಕೊಡುತ್ತೇವೆ. ಪರೇಶ್ ಮೇಸ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಸಿಬಿಐ ಕೂಡ ಈ ವಿಚಾರದಲ್ಲಿ ಸೋ ಮೋಟೋ ಕೇಸು ಹಾಕಬೇಕು. ಇಲ್ಲದಿದ್ದರೆ ನಾವೇ 15 ದಿನ ಬಿಟ್ಟು ಸಿಬಿಐಗೆ ದೂರು ಕೊಡುತ್ತೇವೆ. ಕಾನೂನು ಪ್ರಕಾರ ಕ್ರಮಕ್ಕೆ ಆಗ್ರಹ ಮಾಡುತ್ತೇವೆ ಎಂದರು.