ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದ ಜನರು ಸೋಲಿಸಿದರೂ ಪರವಾಗಿಲ್ಲ, ನಾನು ಇಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಧಿಕಾರವಿದೆ. ತಮ್ಮ ಅಭಿಪ್ರಾಯ ತಿಳಿಸುವ ಹಕ್ಕನ್ನು ಪ್ರತಿಯೊಬ್ಬರು ಹೊಂದಿದ್ದಾರೆ. ಪಕ್ಷ, ಸಿದ್ಧಾಂತ, ಸಾಧನೆಗಳ ಆಧಾರದ ಮೇಲೆ ಅವರು ಪ್ರಚಾರ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನಾವು ಕೂಡ ತಂತ್ರ ಹೆಣೆಯುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಗುಡುಗಿದರು.
ಕಲಬುರಗಿ ನನ್ನ ನಾಡು. ಇಲ್ಲಿನ ಜನರು 11 ಬಾರಿ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಬೇರೆ ಕಡೆ ಹೋಗುವ ಪ್ರಶ್ನೆಯೇ ಇಲ್ಲ. ನನ್ನನ್ನ ಸೋಲಿಸುವುದು ಗೆಲ್ಲಿಸುವುದು ಇಲ್ಲಿನ ಜನರಿಗೆ ಬಿಟ್ಟ ವಿಚಾರ. ಕಲಬುರಗಿ ಕ್ಷೇತ್ರದ ಜನರೇ ನನ್ನ ಪಾಲಿನ ದೇವರು. ಅವರು ಎಲ್ಲಿಯವರೆಗೂ ಇಲ್ಲಿ ಇರಿ ಅಂತಾರೋ ಇಲ್ಲಿಯವರೆಗೆ ಇಲ್ಲೇ ಇರುತ್ತೇನೆ. ನನ್ನ ಬೇಡ ಅಂದರೂ ನಾನು ಇಲ್ಲೇ ಇರುತ್ತೇನೆ ಎಂದರು.
ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ವಿಚಾರ ಮಾಡಿಲ್ಲ. ಕಲಬುರಗಿ ಕ್ಷೇತ್ರದಿಂದ ಮಾತ್ರ ಚುನಾವಣೆ ಎದುರಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv