ಬೆಂಗಳೂರು: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುವ ವಿಚಾರವಾಗಿ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಯವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.
ಸುಮಲತಾಗೆ ತಾವು ಬೆಂಬಲ ನೀಡಿಲ್ಲ. ಇದನ್ನ ಪ್ರೂವ್ ಮಾಡಿ ತೋರಿಸಲು ನಾನೇನು ಆಂಜನೇಯ ತರಹ ಎದೆ ಬಗೆದು ತೋರಿಸಲಿಕ್ಕಾಗುವುದಿಲ್ಲ ಎಂದು ಚೆಲುವರಾಯಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಮಂಡ್ಯ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಪಕ್ಷದ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಸಭೆ ಕರೆದಿದ್ರು. ಚುನಾವಣಾ ವಿಚಾರವಾಗಿ ಚರ್ಚೆ ಮಾಡಿದ್ರು. ಏನೆಲ್ಲಾ ಚರ್ಚೆ ಮಾಡಬೇಕೋ ಅದನ್ನ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಬಂಡಾಯ ಶಮನ ವಿಚಾರವಾಗಿ ಎಲ್ಲವನ್ನೂ ಮಾತನಾಡಿದ್ದಾರೆ ಎಂದು ತಿಳಿಸಿದ್ರು.
ಅಲ್ಲದೆ ಸಿಎಂ ತಮ್ಮನ್ನ ನಿಖಿಲ್ ಪರ ಪ್ರಚಾರಕ್ಕೆ ಕರೆಯಬೇಡಿ ಎಂದಿದ್ದಾರೆ. ಹೀಗಾಗಿ ಅವರೇ ಹಾಗೆ ಹೇಳಿದ ಮೇಲೆ ಅವರ ಸ್ಟೇಟ್ ಮೆಂಟ್ ಗೆ ಪ್ರತಿಕ್ರಿಯಿಸುವುದಕ್ಕೆ ನಾನು ಅವರಷ್ಟು ದೊಡ್ಡವನಲ್ಲ ಅಂತ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಹೈಕಮಾಂಡ್ ಸೂಚನೆಯಂತೆ ಮಂಡ್ಯ ಕಾಂಗ್ರೆಸ್ ಅಸಮಾಧಾನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮುಖಂಡರ ಸಭೆ ನಡೆಸಿದ್ರು. ತಡರಾತ್ರಿ ಮಂಡ್ಯ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾದ ಮೇಲೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ನಿಖಿಲ್ಗೆ ಬೆಂಬಲ ನೀಡಲ್ಲ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡ್ತೆವೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಈ ವಿಚಾರವನ್ನೂ ಕೂಡ ಚರ್ಚಿಸಲಾಯಿತು.