ಬಳ್ಳಾರಿ: ರಾಜ್ಯದಲ್ಲಿ ಆಪರೇಷನ್ ಕಮಲದ ವದಂತಿ ನಡುವೆ ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
ಆಪರೇಷನ್ ಕಮಲದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ನಾನು ಮುಂಬೈಗೂ ಹೋಗಿಲ್ಲ. ಬೆಂಗಳೂರಿಗೂ ಹೋಗಿಲ್ಲ. ನನ್ನ ಇಬ್ಬರು ಮಕ್ಕಳು ಚಿಕ್ಕಮಗಳೂರಿನಲ್ಲಿ ಓದುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ನೋಡಲು ಹೋಗಿ, ಎರಡು ದಿನಗಳು ನಾನು ಅಲ್ಲಿಯೇ ಇದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ಕಂಪ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಬೇಡಿಕೆ ಅಷ್ಟೇ. ಅತೃಪ್ತರ ಬಣದಲ್ಲಿ ನಾನು ಕಾಣಿಸಿಕೊಂಡಿಲ್ಲ. ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ ಅವರ ಮನವೊಲಿಸುಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದರು.
ನಾನು ಎರಡು ದಿನ ಚಿಕ್ಕಮಗಳೂರಿಗೆ ಹೋಗಿದ್ದಕ್ಕೆ ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ಬಿಂಬಿಸಿದವು. ಇದರಿಂದಾಗಿ ಕ್ಷೇತ್ರದ ಜನರು ನನ್ನ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮುಂಬೈನಲ್ಲಿರುವ ಶಾಸಕರ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದೆ. ಈ ಹಿಂದೆ ಹಣ ಪಡೆದು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕುರಿತು ನನಗೆ ಗೊತ್ತಿದೆ. ನನ್ನ ಉದ್ದೇಶ ಹಾಗೂ ಗುರಿ ಕೇವಲ ಕ್ಷೇತ್ರದ ಅಭಿವೃದ್ಧಿ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv