ಕೊಪ್ಪಳ: ದೇಶ ಇಬ್ಭಾಗ ಮಾಡಲು ಸಹಿ ಹಾಕಿದ ಕಾಂಗ್ರೆಸ್, ತುಂಡಾದ ಭಾರತದಲ್ಲೂ ಹಿಂದೂಗಳು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ರಾಮಮಂದಿರ (Ram Mandir) ಉದ್ಘಾಟನೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ವಾಗ್ದಾಳಿ ನಡೆಸಿದರು.
ಕೊಪ್ಪಳದ (Koppal) ಆಂಜನಾದ್ರಿ ಬೆಟ್ಟದಲ್ಲಿ ಹನುಮಂತನ ದರ್ಶನ ಪಡೆದರು. ನಂತರ ಕರಸೇವಕರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂ ವಿರೋಧಿ ಬುದ್ದಿ ಕಾಂಗ್ರೆಸ್ನ (Congress) ಡಿಎನ್ಎನಲ್ಲೇ ಬಂದಿದೆ. ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳುಲು ಸುಳ್ಳುಗಳ ಸಬೂಬು ಹೇಳುತ್ತಿದ್ದಾರೆ. ಈಗ ರಾಮಮಂದಿರ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುತ್ತಿರುವುದನ್ನು ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಹಿಂದೂ ಕಾರ್ಯಕರ್ತರನ್ನು ಹುಡುಕಿ ಕೇಸ್ ಹಾಕುತ್ತಿದ್ದಾರೆ. ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಎಲ್ಲ ಕಡೆ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ. ಕಾಂಗ್ರೆಸ್ನವರು ಏನಾದರೂ ಮಾಡಲಿ. ನಮ್ಮ ಕಾರ್ಯಕರ್ತರ ಜೊತೆ ನಾವಿದ್ದೇವೆ. ಕಾರ್ಯಕರ್ತರ ರಕ್ಷಣೆ ನಾವು ಮಾಡುತ್ತೇವೆ. ಸವಾಲು ಸ್ವೀಕರಿಸಿ ನ್ಯಾಯಯುತ ಹೋರಾಟ ಮಾಡುತ್ತೇವೆ. ಜೈಲಿಗೆ ಹೋಗೋದು ನಮಗೇನು ಹೊಸದಲ್ಲ. ನಮ್ಮ ಮೇಲೆ ಕೇಸ್ ಹಾಕಿದ್ರೆ ನಾವೇ ಜೈಲು ಬರೋ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಕರಸೇವಕನ ಬಂಧನ ಪ್ರಕರಣದಲ್ಲಿ ಜೋಶಿ ಕೈವಾಡವಿದೆ: ಶೆಟ್ಟರ್ ಗಂಭೀರ ಆರೋಪ
ಬಿ.ಕೆ.ಹರಿಪ್ರಸಾದ್ ಅವರ ಗೋಧ್ರಾ ಮಾದರಿ ಗಲಭೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದ್ ಅವರಿಗೆ ಸಿದ್ದರಾಮಯ್ಯ ಅವರ ಒಳಸುಳಿ ಚನ್ನಾಗಿ ಗೊತ್ತಿದೆ. ಸಿಎಂ ಯಾರ ರಕ್ಷಣೆ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡಿದವರ ಕೇಸ್ ವಾಪಸ್ ಪಡೆದಿದ್ದಾರೆ. ಸಿಎಂ ಹಿಂಬಾಲಕರು ಈ ರೀತಿ ಕೃತ್ಯ ಎಸಗಬಹುದು ಎಂಬ ಸೂಚನೆ ಹರಿಪ್ರಸಾದ್ ಅವರಿಗೆ ಇರಬಹುದು. ಆ ಮಾಹಿತಿಯ ಮೇಲೆ ಹರಿಪ್ರಸಾದ್ ಈ ಹೇಳಿಕೆ ನೀಡಿರುತ್ತಾರೆ. ಅವರನ್ನ ತನಿಖೆಗೆ ಒಳಪಡಿಸಬೇಕು. ರಾಮಭಕ್ತರಿಗೆ ರಕ್ಷಣೆ ಕೊಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.
ಅಂಜನಾದ್ರಿ ಅಭಿವೃದ್ಧಿ ವಿಚಾರದಲ್ಲಿ ಸಚಿವ ಶಿವರಾಜ ತಂಗಡಗಿ ಉದ್ದುದ್ದ ಮಾತಾಡಿದ್ದಾರೆ. ಸೋಲು ಗೆಲುವು ಸಹಜ. ಸುಮಾರು 60 ವರ್ಷ ಅಧಿಕಾರ ನಡೆಸಿ ಕಾಂಗ್ರೆಸ್ ಏಕೆ ಅಂಜನಾದ್ರಿ ಅಭಿವೃದ್ಧಿ ಮಾಡಲಿಲ್ಲ. ವ್ಯಕ್ತಿಗತ ರಾಮಭಕ್ತಿಯನ್ನು ನಾನು ಪ್ರಶ್ನೆ ಮಾಡಲ್ಲ. ಪಕ್ಷದ ನಿಲುವು ಏನು ಎಂದು ಹೇಳಲಿ. ಶಿವರಾಜ ತಂಗಡಗಿ ಅವರ ರಾಮಭಕ್ತಿ ಸ್ವಾರ್ಥದ ನೆಲೆಯಿಂದ ಕೂಡಿರೋದು ರಾಷ್ಟ್ರದ ಭಕ್ತಿ ಅಲ್ಲ ತಿರುಗೇಟು ನೀಡಿದರು. ಇದನ್ನೂ ಓದಿ: ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ: ಪರಮೇಶ್ವರ್
ದತ್ತಪೀಠಕ್ಕೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಕಳೆದ 7 ವರ್ಷದ ಹಿಂದೆ ಭಗವಾಧ್ವಜ ಹಾರಿಸಿದ್ದಾರೆ ಎಂದು ಕೇಸ್ ಹಾಕಿದ್ದಾರೆ. ಸಿದ್ದರಾಮಯ್ಯಗೆ ಕೇಸರಿ ಕಂಡರೆ ಆಗಲ್ಲ ಎಂದು ಗೊತ್ತಾಗಿದೆ. ಪೀಠದ ಆಸ್ತಿಯನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅಕ್ರಮ ಘೋರಿ ನಿರ್ಮಾಣವಾಗಿದೆ. ಅದನ್ನ ಸ್ಥಳಾಂತರ ಮಾಡಬೇಕು. ಕಂದಾಯ ಇಲಾಖೆಯ ಪ್ರಕಾರ ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾ ಬೇರೆ. ದತ್ತಪೀಠವನ್ನು ಪೂರ್ಣ ಪ್ರಮಾಣದಲ್ಲಿ ಹಿಂದೂಗಳ ವಶಕ್ಕೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಲಕ್ಷ್ಮಣ ಸವದಿ ರಾಮಮಂದಿರಕ್ಕೆ ದೇಣಿಗೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಕೊಟ್ಟಿದ್ದು ಕೆಟ್ಟಿತೆನಬೇಡ ಎಂದು ಮಾತ್ರ ಸವದಿ ಅವರಿಗೆ ಹೇಳಲು ಬಯಸುತ್ತೇನೆ. ಹಣ ಕೊಟ್ಟ ಆಧಾರದಲ್ಲಿ ಯಾರಿಗೂ ಆಮಂತ್ರಣ ಕೊಟ್ಟಿಲ್ಲ. ದಾನ ಕೊಟ್ಟಿದ್ದು ಹೇಳೋದು ಸೂಕ್ತ ಅಲ್ಲ ಅಂತಾ ಹಿರಿಯರು ಹೇಳಿದ್ದಾರೆ. ಜನವರಿ 22ರ ನಂತರ ನಾನು ಅಯೋಧ್ಯೆಗೆ ಹೋಗುತ್ತಿದ್ದೇನೆ. ಸವದಿ ಅವರೇ ಜೊತೆಗೆ ಹೋಗೋಣ ಬನ್ನಿ ಎಂದು ಆಹ್ವಾನ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿ ಕೇಸ್ – ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು
ಮಂತ್ರಾಕ್ಷತೆಯೂ ಅನ್ನಭಾಗ್ಯದ ಅಕ್ಕಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಕ್ಕಿ ಬೆಳೆದ ರೈತನೇ ನನ್ನದು ಎಂದು ಹೇಳಲ್ಲ. ವಾಸ್ತವದಲ್ಲಿ ಇವರು ಒಂದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ರೈತ ಬೆಳೆಯದೆ ಇದ್ದರೆ ನಾನು ಕೊಟ್ಟೆ ಎಂದು ಹೇಳಲು ಆಗುತ್ತಾ? ಎಲ್ಲವೂ ಭಗವಂತ ಕೊಟ್ಟಿದ್ದು ಎಂದು ಹೇಳಿದರು.