ಬೆಂಗಳೂರು: ವಿಪಕ್ಷ ನಾಯಕ, ಸಿಎಲ್ ಪಿ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೀಗೆ ಸಾಲು ಸಾಲು ಸ್ಥಾನಮಾನಗಳ ನಿರೀಕ್ಷೆಯಲ್ಲಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ. ಮುಂದಿನ ವಾರದಲ್ಲಿ ಬಹುತೇಕ ಎಲ್ಲಾ ಸ್ಥಾನಗಳಿಗೂ ಹೈಕಮಾಂಡ್ ಆಯ್ಕೆ ಪ್ರಕ್ರಿಯೆ ಮಾಡಿ ಮುಗಿಸಲಿದೆ. ಆದರೆ ಕೊನೆ ಗಳಿಗೆಯಲ್ಲಿ ಸ್ಥಾನಮಾನಕ್ಕಾಗಿ ಲಾಬಿ ಮಾಡಲು ದೆಹಲಿಗೆ ಹೊರಟಿದ್ದ ಕೈ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ.
ಲಾಬಿ ಮಾಡೋಕೆ ಯಾರು ದೆಹಲಿಗೆ ಬರೋದು ಬೇಡ. ಯಾರಿಗೂ ಎಐಸಿಸಿ ಅಧ್ಯಕ್ಷರ ಭೇಟಿಗೆ ಅವಕಾಶ ಇಲ್ಲಾ ಅಂತ ಖಡಕ್ಕಾಗಿ ಸಂದೇಶ ರವಾನಿಸಿದೆ. ಇದರ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ನಂಬಿಗೆಯ ಬಂಟ ಮಾಜಿ ಡಿಸಿಎಂ ಪರಮೇಶ್ವರ್ ಗೆ ಬುಲಾವ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ನಾಯಕರ ನಿರೀಕ್ಷೆಗಳು ಹಾಗೂ ಮನಸ್ಥಿತಿ ಹಾಗೂ ಬಣ ರಾಜಕಾರಣದ ಬಗ್ಗೆ 4 ದಿನದ ಹಿಂದಷ್ಟೆ ಪರಮೇಶ್ವರ್ ಗುಪ್ತ ವರದಿಯೊಂದನ್ನ ಹೈಕಮಾಂಡ್ ಗೆ ತಲುಪಿಸಿದ್ದರು. ವರದಿ ಪಡೆದ ಹೈಕಮಾಂಡ್ ಪರಮೇಶ್ವರ್ ರನ್ನ ಮಾತ್ರ ದೆಹಲಿಗೆ ಕರೆದು ಉಳಿದ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿದೆ.
ಆ ಮೂಲಕ ಕೊನೆ ಗಳಿಗೆಯ ಕಸರತ್ತಿನ ಸಿದ್ಧತೆಯಲ್ಲಿದ್ದ ರಾಜ್ಯ ಕೈ ನಾಯಕರಿಗೆ ಹೈಕಮಾಂಡ್ ಹಾಕಿದ ಲಗಾಮು ನುಂಗಲಾರದ ಬಿಸಿ ತುಪ್ಪವಾಗಿದೆ. ಇತ್ತ ಪರಮೇಶ್ವರ್ ರನ್ನ ಮಾತ್ರ ಕರೆದಿದ್ದು ಇತರೆ ನಾಯಕರ ಮೇಲೆ ಹೈಕಮಾಂಡ್ ಗೆ ನಂಬಿಕೆ ಇಲ್ಲ ಎಂಬ ಪ್ರಶ್ನೆಯೊಂದು ಹುಟ್ಟುಕೊಂಡಿದೆ.