ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಹಾಗೂ ವಿಪಕ್ಷ ನಾಯಕನ ಸ್ಥಾನ ಎಲ್ಲವು ಫೆಬ್ರವರಿ 17ರ ವಿಧಾನಸಭಾ ಅಧಿವೇಶನಕ್ಕೂ ಮೊದಲೇ ಘೋಷಣೆ ಆಗಬಹುದು ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ನಿರೀಕ್ಷೆ ಆಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಸ್ಥಾನಮಾನ ಘೋಷಣೆ ಮಾಡದೆ ರಾಜ್ಯದ ಎಲ್ಲಾ ಕೈ ನಾಯಕರಿಗೆ ಶಾಕ್ ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನ, ಹಾಗೂ ಸಿಎಲ್ ಪಿ ನಾಯಕನ ಸ್ಥಾನ ಎಲ್ಲವೂ ಅಧಿವೇಶನಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಘೋಷಿಸುವ ಸಾಧ್ಯತೆ ಇತ್ತು. ಆದರೆ ತಮ್ಮ ಸ್ಥಾನಮಾನಗಳಿಗಿಂತ ಪ್ರಮುಖವಾಗಿ ಇನ್ನೊಬ್ಬರ ಸ್ಥಾನಮಾನ ತಪ್ಪಿಸಲು ರಾಜ್ಯ ಕೈ ನಾಯಕರು ನಡೆಸಿದ ಲಾಬಿ ಹೈಕಮಾಂಡ್ ಅಸಮಧಾನಕ್ಕೆ ಕಾರಣವಾಗಿದೆಯಂತೆ. ಆದ್ದರಿಂದ ಯಾವುದೇ ಸ್ಥಾನಮಾನ ಘೋಷಣೆ ಮಾಡದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ತಿಳಿದು ಬಂದಿದೆ.
ಆ ಮೂಲಕ ಕೆಪಿಸಿಸಿಗೆ ನಾನೇ ಅಧ್ಯಕ್ಷ ಅಂದುಕೊಂಡಿದ್ದ ಡಿಕೆಶಿ, ವಿಪಕ್ಷ ಹಾಗೂ ಸಿಎಲ್ ಪಿಗೆ ನಾನೇ ನಾಯಕ ಅಂದುಕೊಂಡಿದ್ದ ಸಿದ್ದರಾಮಯ್ಯ ಇಬ್ಬರಿಗೂ ಹೈಕಮಾಂಡ್ ಶಾಕ್ ನೀಡಿದೆ. ಕೊನೆ ಗಳಿಗೆಯಲ್ಲಿ ಸ್ಥಾನಮಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಉಳಿದ ಕಾಂಗ್ರೆಸ್ ನಾಯಕರಿಗೆ ನಿರಾಸೆಯಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರ ಆಟಾಟೋಪ ಕಂಡು ಅಸಮಧಾನಗೊಂಡ ಹೈಕಮಾಂಡ್ ರಾಜ್ಯ ನಾಯಕರಿಗೆ ಅನಿರೀಕ್ಷಿತ ಶಾಕ್ ನೀಡಿದೆ ಅನ್ನುವುದಂತು ನಿಜ.