ಬೆಂಗಳೂರು: ಗುರುವಾರ, ಶುಕ್ರವಾರ ಎರಡು ದಿನ ಸಹ ಕೆಪಿಸಿಸಿ ಅಧ್ಯಕ್ಷರ ಹೆಸರು ಯಾವ ಕ್ಷಣದಲ್ಲಿ ಬೇಕಾದರು ಪ್ರಕಟವಾಗಬಹುದು ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಅದರಲ್ಲೂ ಶುಕ್ರವಾರ ಸಂಜೆ ಕೆಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ಹಾಗೂ ವಿಪಕ್ಷ ನಾಯಕ ಎಲ್ಲಾ ಸ್ಥಾನಕ್ಕೂ ಹೆಸರು ಪ್ರಕಟವಾಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಬಣದ ಒಳಗಿನ ಕೆಲವು ಗೊಂದಲಗಳೇ ಎಲ್ಲಾ ಬೆಳವಣಿಗೆಗೆ ಬ್ರೇಕ್ ಹಾಕಿದೆ.
ವಿಪಕ್ಷ ಹಾಗೂ ಸಿಎಲ್ ಪಿ ನಾಯಕರಾಗಿದ್ದ ಸಿದ್ದರಾಮಯ್ಯ ತಮಗೆ ಪುನಃ ಅವಕಾಶ ಮಾಡಿಕೊಡುವುದಾದರೆ ಎರಡು ಸ್ಥಾನವನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇರೆಯವರಿಗೆ ಕೊಡುವುದಾದರು ವಿಪಕ್ಷ ಹಾಗೂ ಸಿಎಲ್ ಪಿ ಎರಡು ಒಬ್ಬರಿಗೆ ಕೊಡಿ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನೊಂದು ಕಡೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಎಷ್ಟು ಜನರನ್ನ ನೇಮಿಸಬೇಕು ಅನ್ನೋ ವಿಷಯದಲ್ಲಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ನಡುವೆ ಒಮ್ಮತ ಮೂಡಿಲ್ಲ. ಇನ್ನೊಂದು ಇಂಟರೆಸ್ಟಿಂಗ್ ವಿಷಯ ಅಂದರೆ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಕೋಟಾದಲ್ಲಿ ಜಮೀರ್ ಅಹಮ್ಮದ್ ರನ್ನ ತರಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಜಮೀರ್ ನೇಮಕಕ್ಕೆ ಮೂಲ ಕಾಂಗ್ರೆಸ್ಸಿಗರು ಬಿಲ್ ಕುಲ್ ಒಪ್ಪಿಲ್ಲ ಎಂದು ತಿಳಿದು ಬಂದಿದೆ.
ಹೀಗೆ ರಾಜ್ಯ ಕಾಂಗ್ರೆಸ್ ನಾಯಕರ ಸಾಲು ಸಾಲು ಗೊಂದಲಗಳು ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಸ್ಥಾನಮಾನ ಘೋಷಣೆ ಆಗದಂತೆ ತಡೆದಿದೆ. ಈ ಬೆಳವಣಿಗೆ ರಾಜ್ಯ ಕೈ ನಾಯಕರಲ್ಲಿ ಇನ್ನೊಂದು ರೀತಿಯ ಆತಂಕಕ್ಕೆ ಕಾರಣವಾಗಿದ್ದು, ಕೊನೆ ಗಳಿಗೆಯಲ್ಲಿ ಯಾವ ಅವಕಾಶ ಯಾರ ಕೈ ತಪ್ಪುತ್ತೋ ಅನ್ನೋ ಆತಂಕವಂತು ರಾಜ್ಯ ಕೈ ನಾಯಕರ ನೆಮ್ಮದಿ ಕೆಡಿಸಿದಂತು ನಿಜ.