ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು (Congress Guarantee) ರಾಜ್ಯದ ಎಲ್ಲರಿಗೂ ಉಚಿತ ಎಂದು ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ನಿಧಾನವಾಗಿ ತಮ್ಮ ವರಸೆಯನ್ನು ಬದಲಾಯಿಸುತ್ತಿದ್ದು ಇದಕ್ಕೆ ಹೊಸದಾಗಿ ಮಂಕಾಳು ವೈದ್ಯ (Mankala Vaidya) ಸೇರ್ಪಡೆಯಾಗಿದ್ದಾರೆ.
ಆರ್ಥಿಕ ಸ್ಥಿತಿವಂತರು ಗ್ಯಾರಂಟಿ ಯೋಜನೆಯ (Guarantee scheme) ಲಾಭ ಪಡೆಯದೇ ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಮಂಕಾಳು ವೈದ್ಯ, ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿ ಆರ್ಥಿಕವಾಗಿ ಸ್ಥಿತಿವಂತರಿರುವ ಜನ ಇದರ ಲಾಭ ಪಡೆಯದೇ ಬಿಡಬೇಕು. ಬಡವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ‘ಗ್ಯಾರಂಟಿ’ಗಾಗಿ ಭೂಮಿ ಮಾರಲು ಮುಂದಾಯ್ತಾ ಸರ್ಕಾರ?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕೆಲಸ ಮಾಡಿಲ್ಲ. ಜನ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ನೀಡಿದಂತೆ ಜನರ ಬಳಿಯೂ ಕಾಂಗ್ರೆಸ್ಗೆ ಮತ ಹಾಕುವಂತೆ ಬರೆಸಿಕೊಂಡಿದ್ದರೆ ಪಕ್ಷ ಗೆಲ್ಲುತಿತ್ತೇನೋ ಎಂದು ಹೇಳಿದರು.
ನಮಗೆ ಮತ ಹಾಕಬೇಕು ಎಂಬ ಕಾರಣಕ್ಕೆ ಗ್ಯಾರಂಟಿ ಯೋಜನೆ ತಂದಿಲ್ಲ. ಎಷ್ಟೋ ಜನ ಬಡವರು ವಿದ್ಯುತ್ ಬಿಲ್ ಸಹ ಕಟ್ಟಲಾಗದಿದ್ದನ್ನು ನಾವು ಕಂಡಿದ್ದೇವೆ. ಅಂತವರಿಗೆ ಸಹಾಯ ಆಗಬೇಕು, ಬಡವರಿಗೆ ಇದರಿಂದ ಸಹಾಯವಾಗಬೇಕು ಎಂದು ತಂದಿದ್ದೇವೆ ಎಂದರು. ಇದನ್ನೂ ಓದಿ: ಅನುದಾನ ಸಿಗುತ್ತಿಲ್ಲ – ಸರ್ಕಾರದ ವಿರುದ್ಧವೇ ಕೈ ಶಾಸಕ ನಾಡಗೌಡ ಅಸಮಾಧಾನ