– 18 ಪಠ್ಯ ಬದಲಿಸಿ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರ ಪಠ್ಯಪರಿಷ್ಕರಣೆಯನ್ನು ಗೌಪ್ಯವಾಗಿ ಮಾಡ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಯಾವ ಯಾವ ಪಠ್ಯ ಪರಿಷ್ಕರಣೆ ಆಗಿದೆ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ (Education Department) ಅಧಿಕೃತ ಆದೇಶ ಹೊರಡಿಸಿದೆ.
ಬಿಜೆಪಿ (BJP) ಅವಧಿಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳನ್ನು ಈ ಸರ್ಕಾರ ಕೈಬಿಟ್ಟಿದೆ. ಒಟ್ಟು 18 ಪಠ್ಯಗಳನ್ನು ಪರಿಷ್ಕರಿಸಿದೆ. ಈ ಮಧ್ಯೆ, ಸಾವರ್ಕರ್ ಪಠ್ಯ ಕಡಿತಕ್ಕೆ ಅವರ ಮೊಮ್ಮಗ ರಂಜಿತ್ ಸಾರ್ವಕರ್ ಖಂಡಿಸಿದ್ದಾರೆ. ನೀವು ಏನನ್ನಾದ್ರೂ ಹೆಚ್ಚು ದಮನಿಸಲು ನೋಡಿದ್ರೆ ಅದು ಹೆಚ್ಚು ಮರುಕಳಿಸುತ್ತೆ. ಅದು ಸಹಜ ಪ್ರಕ್ರಿಯೆ, ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತೆ ಎಂದು ವ್ಯಾಖ್ಯಾನಿಸಿದ್ದಾರೆ.
ಏನೇನು ತಿದ್ದುಪಡಿ..?
2023-24ನೇ ಸಾಲಿನಲ್ಲಿ ಜಾರಿಯಲ್ಲಿರುವ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬದಲಾವಣೆಗಳ ವಿಷಯಗಳು
6ನೇ ತರಗತಿ ಸಮಾಜ ವಿಜ್ಞಾನ ಭಾಗ- 1
ನಮ್ಮ ಹೆಮ್ಮೆಯ ರಾಜ್ಯ- ಕರ್ನಾಟಕ ಎಂಬ ಅಧ್ಯಾಯದ ಪುಟ ಸಂಖ್ಯೆ 33ರಲ್ಲಿ ಕಲಬುರ್ಗಿ ವಿಭಾಗದ ವಿಷಯಾಂಶವನ್ನು ಬೋಧಿಸುವಾಗ “ಈ ವಿಭಾಗದ ಜಿಲ್ಲೆಗಳಿಗೆ ವಿಶೇಷ ನೆರವು ಸಮಾಜ ವಿಜ್ಞಾನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ”ಎಂಬ ವಾಕ್ಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ 1
>.“ವೇದಕಾಲದ ಸಂಸ್ಕೃತಿ”ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
>. ಹೊಸ ಧರ್ಮಗಳ ಉದಯ” ಎಂಬ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ 2
>. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಅಧ್ಯಾಯದ ಜೊತೆಗೆ ಮಾನವ ಹಕ್ಕುಗಳು ಎಂಬ ವಿಷಯಾಂಶ ವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ 1
>. ಜಗತ್ತಿನ ಪ್ರಮುಖ ಘಟನೆಗಳು” ಎಂಬ ಅಧ್ಯಾಯದಲ್ಲಿ ಎಲ್ಲೆಲ್ಲಿ ‘ರಿಲಿಜನ್’ ಎಂದು ಬಂದಿದೆಯೋ ಅಲ್ಲೆಲ್ಲಾ ‘ಧರ್ಮ’ ಎಂದು ಬದಲಾಯಿಸಲಾಗಿದೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ-1
>. “ಮೈಸೂರು ಮತ್ತು ಇತರ ಸಂಸ್ಥಾನಗಳು” ಎಂಬ ಅಧ್ಯಾಯದ ಜೊತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ಕಮಿಷನರ್ಗಳ ಆಡಳಿತ, ಹತ್ತನೆಯ ಚಾಮರಾಜ ಒಡೆಯರು, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ ಮತ್ತು ಸರ್, ಮಿರ್ಜಾ ಇಸ್ಮಾಯಿಲ್ ಈ ವಿಷಯಾಂಶಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
>. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು ಎಂಬ ಅಧ್ಯಾಯದ ಜೊತೆಗೆ ಮಹಿಳಾ ಸಮಾಜ ಸುಧಾರಕಿಯರು ವಿಷಯಾಂಶಗಳನ್ನು ಹೊಸದಾಗಿ ಸೇರ್ಪಡೆ.
7ನೇ ತರಗತಿ ಸಮಾಜ ವಿಜ್ಞಾನ ಭಾಗ-2
>. “ಸ್ವಾತಂತ್ರ್ಯ ಸಂಗ್ರಾಮ” ಎಂಬ ಅಧ್ಯಾಯದ ಜೊತೆಗೆ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯಾಂಶಗಳನ್ನು ಸೇರಿಸಲಾಗಿದೆ.
10ನೇ ತರಗತಿ ಸಮಾಜ ವಿಜ್ಞಾನ ಭಾಗ-1
“ಭಾರತಕ್ಕಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು” ಎಂಬ ಅಧ್ಯಾಯದ ಪ್ರಾದೇಶಿಕವಾದ ಎಂಬ ಉಪ ಶೀರ್ಷಿಕೆ ಅಡಿಯಲ್ಲಿ ಭಾಷಾಭಿಮಾನವು ರಾಷ್ಟ್ರೀಯವಾದದ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚಿಗೆ ಆಂಧ್ರಪ್ರದೇಶದಲ್ಲಿನ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿನ ತೆಲಂಗಾಣ ಭಾಗದ ಪ್ರಾದೇಶಿಕವಾದದ ಹೋರಾಟಗಳು ಕೂಡ ದೇಶದ ಅಭಿವೃದ್ಧಿಗೆ ತೊಡಕಾಗುವ ಸಾಧ್ಯತೆಗಳಿವೆ ಇಂತಹ ಸಂಕುಚಿತ ಪ್ರಾದೇಶಿಕ ವಾದವನ್ನು ದೂರಿಕರಿಸಲು ನಮ್ಮ ಭಾರತ ಸಂವಿಧಾನವೇ ಹಲವಾರು ಮಾರ್ಗಗಳನ್ನ ಸೂಚಿಸಿದೆ ಎಂಬ ವಾಕ್ಯವನ್ನು ಕೈ ಬಿಡಲಾಗಿದೆ.