ಬೆಂಗಳೂರು: ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ನಾಳೆ ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆ ಕುಮಾರಸ್ವಾಮಿ ಏಕಾಂಗಿಯಾಗಿ ಪ್ರಮಾಣ ಸ್ವೀಕರಿಸಿತ್ತರಾ ಎಂಬುವುದರ ಬಗ್ಗೆ ಅನುಮಾನಗಳು ಬಗೆಹರಿದಿದ್ದು, ಉಪ ಮುಖ್ಯಮಂತ್ರಿಯಾಗಿ ಜಿ.ಪರಮೇಶ್ವರ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಕುರಿತು ಕಾಂಗ್ರೆಸ್ ಉಸ್ತುವರಿಯಾದ ವೇಣುಗೋಪಾಲ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಅವರು ಸಭೆ ನಡೆಸಿ ಚರ್ಚೆ ನಡೆಸಿದರು. ಬಳಿಕ ನಾಳೆ ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿತ್ತಾರೆ ಎಂದು ಮಾಹಿತಿ ನೀಡಿದರು. ಮಾಜಿ ಸಚಿವ ರಮೇಶ್ ಕುಮಾರ್ ಅವ್ರಿಗೆ ಸ್ಪೀಕರ್ ಸ್ಥಾನ ನೀಡಲಾಗ್ತಿದೆ ಎಂದು ಹೇಳಲಾಗ್ತಿದ್ದು, ಇದೂವರೆಗೂ ಅಧಿಕೃತ ಆದೇಶ ಬಂದಿಲ್ಲ.
ಕಾಂಗ್ರೆಸ್ನಲ್ಲಿದ್ದ ಡಿಸಿಎಂ ಪೈಪೋಟಿಗೆ ತೆರೆ ಬಿದ್ದಿದ್ದು, ದಲಿತ ನಾಯಕ ಪರಮೇಶ್ವರ್ಗೆ ಉಪಮುಖ್ಯಮಂತ್ರಿ ಸ್ಥಾನ ಖಾತ್ರಿಯಾಗಿದೆ. ಇನ್ನು ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರಮಟ್ಟದ ಹಲವು ಪ್ರಾದೇಶಿಕ ಪಕ್ಷಗಳ ಪ್ರಮುಖರು ಆಗಮಿಸಲಿದ್ದಾರೆ. ತೆಲಂಗಾಣ ಸಿಎಂ ಕೆಸಿಆರ್ ಇಂದೇ ಆಗಮಿಸಿ ಶುಭಕೋರಿದರು.
ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಇರುವಂತೆಯೇ ಸಮನ್ವಯ ಸಮಿತಿ ಇಲ್ಲದೆಯೇ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅಧಿಕಾರ ಹಂಚಿಕೆ ನಡೆದಿದೆ. ವಿಶ್ವಾಸಮತ ಯಾಚನೆ ಬಳಿಕ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ.
* ಕುಮಾರಸ್ವಾಮಿ, ಮುಖ್ಯಮಂತ್ರಿ
* ಜಿ. ಪರಮೇಶ್ವರ್, ಉಪ ಮುಖ್ಯಮಂತ್ರಿ
* ರಮೇಶ್ ಕುಮಾರ್, ಸ್ಪೀಕರ್
* ಜೆಡಿಎಸ್ಗೆ ಉಪಸಭಾಪತಿ
* ಕಾಂಗ್ರೆಸ್ಗೆ 20 ಸಚಿವ ಸ್ಥಾನ
* ಜೆಡಿಎಸ್ಗೆ 12 ಸಚಿವ ಸ್ಥಾನ
ಪ್ರಮಾಣ ವಚನ ಸಮಾರಂಭಕ್ಕೆ ವಿಧಾನಸೌಧ ಸಂಪೂರ್ಣ ಸಜ್ಜಾಗಿದೆ. ಬೃಹತ್ ವೇದಿಕೆ, ಎಲ್ಇಡಿ ವ್ಯವಸ್ಥೆ, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ ಶಕ್ತಿಕೇಂದ್ರ ವಿಧಾನಸೌಧದ ಬಳಿ ಪ್ರಮಾಣವಚನ ಸಮಾರಂಭ ನಡೆಯಲಿರುವ ಕಾರಣ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಬೆಂಬಲಿಗರು ನಾಲ್ಕೂ ದಿಕ್ಕುಗಳಿಂದ ನಗರಕ್ಕೆ ಪ್ರವೇಶಿಸಲಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ 10 ಗಂಟೆಯಿಂದಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿದ್ದು, ಜೊತೆಗೆ ವರ್ಷಧಾರೆಯ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
— K C Venugopal (@kcvenugopalmp) May 22, 2018