ಬಳ್ಳಾರಿ: ಸ್ವಾತಂತ್ರ್ಯ ಕೊಡಿಸಿದ್ದು ಕಾಂಗ್ರೆಸ್. ಬಿಜೆಪಿಯವರಾರು ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಬಿಜೆಪಿಯಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಿಂದ ದೇಶ ಸಾಕಷ್ಟು ಹಿನ್ನೆಡೆ ಅನುಭವಿಸಿದೆ. ಬದುಕೋಕು ಬಿಡಲ್ಲ ಸಾಯೋಕು ಬಿಡಲ್ಲ ಸತ್ತ ಮೇಲೂ ಬಿಡೋದಿಲ್ಲ ಅಷ್ಟೊಂದು ಜಿಎಸ್ಟಿ ಹಾಕ್ತಾರೆ. ಹಿಂದುತ್ವ ಅಜೆಂಡಾ ಭಾವನೆ ಕೆರಳಿಸುತ್ತಾ ಚುನಾವಣೆ ಮಾಡ್ತಾರೆ. 40% ಭ್ರಷ್ಟಾಚಾರ ಮಾಡಿರೋ ಸರ್ಕಾರ ಕಾಂಟ್ರಾಕ್ಟರ್ ಗಳೇ ಈ ಬಗ್ಗೆ ದೂರನ್ನು ನೀಡಿದ್ದಾರೆ. ಐಟಿ, ಸಿಬಿಐ, ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ 40% ದಿಂದ 80% ಕ್ಕೆ ಹೋದರೂ ಅಚ್ಚರಿಯಿಲ್ಲ. ಹಿಜಬ್, ಹಲಾಲ್, ಪಠ್ಯ ಪುಸ್ತಕ ಗೊಂದಲ. ಇದೇ ಈ ಸರ್ಕಾರದ ಸಾಧನೆ. ಲಿಂಗಾಯತ ಮಠವಲ್ಲ ಎಲ್ಲಾ ಸಮುದಾಯದ ಮಠಕ್ಕೆ ಹೋಗಿದ್ದೇನೆ. ಚರ್ಚ್ ಮಸೀದಿಗೂ ಹೋಗಿದ್ದೇನೆ. ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷನಲ್ಲ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆಂದು 2018ರಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ರು. ಈಗ ಪರಿಸ್ಥಿತಿ ಹಾಗಿಲ್ಲ ಈಗ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸ್ತಾರೆ ಎಂದರು. ಇದನ್ನೂ ಓದಿ: ಹಿಂದೂ ಧರ್ಮ ಒಡೆಯುವುದು, ಮತಾಂತರ ಮಾಡುವುದೇ ಒಡನಾಡಿಯ ಉದ್ದೇಶ: ಮಠದ ಸದಸ್ಯ ಕಿಡಿ
ಕಾಂಗ್ರೆಸ್ ನಲ್ಲಿ ಯಾವುದೇ ಅಂತರಿಕ ಗೊಂದಲವಿಲ್ಲ. ಹೈಕಮಾಂಡ್ ನಿರ್ಣವೇ ಅಂತಿಮ. ಪ್ರತ್ಯೇಕ ಲಿಂಗಾಯತ ಹೋರಾಟ ಸಮಿತಿ ವಿಚಾರದ ಕುರಿತು ಮಾತನಾಡಿ, ಆ ಕಡೆಯವರು ಎಲ್ಲರೂ ಕುಳಿತುಕೊಂಡು ತೀರ್ಮಾನ ಮಾಡಲಿ ಅದಕ್ಕೆ ಬದ್ಧ. ಆನಂದ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಪರೇಷನ್ ಕಮಲದ ಮೂಲಕ ಬಿಜೆಪಿ ಹೋದವರನ್ನು ಈ ಬಾರಿ ಸೋಲಿಸ್ತೇವೆ ಎಂದು ಹೇಳಿದರು.
ಇದೇ ವೇಳೆ ಮುರುಘಾ ಶ್ರೀ ಪೋಕ್ಸೋ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾವು ನ್ಯಾಯದ ಪರವಾಗಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಶ್ರೀಗಳ ಮೇಲೆ ಈ ರೀತಿಯ ಆರೋಪ ಕೇಳಿಬಂದಾಗ ಎಲ್ಲರೂ ಆಶ್ಚರ್ಯರಾಗಿದ್ದರು. ಇದು ತುಂಬಾ ಸೂಕ್ಷ್ಮ ವಿಚಾರ, ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ಇದೆ. ಶ್ರೀಗಳು ರೀತಿಯ ಕೃತ್ಯ ಮಾಡಿದ್ದಾರೆ ಎಂದು ಸಾಬೀತಾದ್ರೆ ಶ್ರೀಗಳಿಗೆ ಶಿಕ್ಷೆ ಆಗಲಿ. ಇಲ್ಲಾ ಇದೊಂದು ಕುತಂತ್ರ ಎಂದಾದರೆ, ಕುತಂತ್ರಿಗಳಿಗೆ ಶಿಕ್ಷೆ ಆಗಲಿ. ಕಾಂಗ್ರೆಸ್ ಯಾವಾಗಲೂ ನ್ಯಾಯದ ಪರವಾಗಿ ಇರಲಿದೆ ಎಂದರು.