ನವದೆಹಲಿ: ಹವಾಲ ಹಣ ಸಂಬಂಧ ಡಿಕೆಶಿ ಆಪ್ತ ಸಹಾಯಕ ಆಂಜನೇಯ ಅವರನ್ನು ತಡರಾತ್ರಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ತಡರಾತ್ರಿ 12 ಗಂಟೆಯ ನಂತರ ಲೋಕನಾಯಕ ಭವನದ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಸುಮಾರು 4-5 ಗಂಟೆಗಳ ಕಾಲ ಆಂಜನೇಯ ಅವರನ್ನು ಇಡಿ ಅಧಿಕಾರಿಗಳು ಫುಲ್ ಡ್ರಿಲ್ ಮಾಡಿದ್ದಾರೆ. ಆಂಜನೇಯ ಈ ಹಿಂದೆ ಐಟಿ ಮುಂದೆ ಹೇಳಿಕೆ ಬದಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಂಜನೇಯ ಅವರನ್ನೇ ಇಡಿ ಅಧಿಕಾರಿಗಳು ಮೊದಲು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಡಿಕೆಶಿಯವರು ದೆಹಲಿಗೆ ಬಂದಾಗ ಅವರ ಎಲ್ಲಾ ವಹಿವಾಟುಗಳನ್ನು ಆಂಜನೇಯ ಅವರೇ ನೋಡಿಕೊಳ್ಳುತ್ತಿದ್ದರು. ಕರ್ನಾಟಕ ಭವನದ ಉದ್ಯೋಗಿಯಾಗಿರುವ ಆಂಜನೇಯ ಅವರು, ಬಹಳ ವರ್ಷಗಳಿಂದ ಡಿಕೆಶಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಡಿಕೆಶಿಯವರ ದೆಹಲಿಯಲ್ಲಿ ನಡೆಯುವಂತಹ ಎಲ್ಲಾ ವ್ಯವಹಾರಗಳು ಅಂಜನೇಯ ಅವರಿಗೆ ಗೊತ್ತಿತ್ತು.
ಈ ಹಿಂದೆ ಡಿಕೆಶಿ ಮನೆ ಮೇಲೆ ಐಟಿ ದಾಳಿಯಾದ ಸಂದರ್ಭದಲ್ಲಿ ಆಂಜನೇಯ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆಂಜನೇಯ ಅವರ ಮನೆಯಲ್ಲೂ ನಗದು ಹಣದ ಜೊತೆಗೆ ವ್ಯವಹಾರಿಕೆ ಪತ್ರಗಳೂ ಲಭಿಸಿತ್ತು. ಹೀಗಾಗಿ ಆಂಜನೇಯ ಅವರನ್ನೇ ಮೊದಲ ಟಾರ್ಗೆಟ್ ಮಾಡಲಾಗಿದೆ.
ಒಟ್ಟಿನಲ್ಲಿ ಡಿಕೆಶಿ ಅವರ ದೆಹಲಿಯ ಎಲ್ಲಾ ವ್ಯವಹಾರಗಳು ಗೊತ್ತಿರುವುದರಿಂದ ಆಂಜನೇಯ ಅವರನ್ನು ವಿಚಾರಣೆ ನಡೆಸಿದರೆ ಮತ್ತಷ್ಟು ಸುಳಿವು, ದಾಖಲೆಗಳು ಸಿಗಬಹುದೆಂದು ಇಡಿ ಲೆಕ್ಕಾಚಾರವಾಗಿದೆ. ಹೀಗಾಗಿ ಡಿಕೆಶಿಯನ್ನು ಕಷ್ಟಡಿಗೆ ತೆಗೆದುಕೊಂಡ ಮೊದಲ ದಿನವೇ ರಾತ್ರಿ ಇಡಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.