ಮೈಸೂರು: ಹಾಸನ ಕ್ಷೇತ್ರದಲ್ಲಿ ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಎಚ್ಡಿ ದೇವೇಗೌಡ ಅವರು ಸ್ಪರ್ಧೆ ಮಾಡಿದರೆ ಮಾತ್ರ ಬೆಂಬಲ ನೀಡುತ್ತೇವೆ. ಬೇರೆಯಾರಿಗೂ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದ ಕಾಂಗ್ರೆಸ್ ಮಾಜಿ ಸಚಿವ ಇಂದು ಸಂಜೆ ವೇಳೆಗೆ ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ.
ಮಾಜಿ ಸಚಿವರಾದ ಎ, ಮಂಜು ಅವರು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ. ಮಂಜು ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇಂದು ಕೂಡ ಜೆಡಿಎಸ್ ವರಿಷ್ಠರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಕುಟುಂಬ ರಾಜಕಾರಣದ ಕುರಿತು ಟೀಕೆ ಮಾಡಿದ್ದರು. ಅಲ್ಲದೇ ಸಚಿವ ಡಿಕೆ ಸುರೇಶ್ ಅವರಿಗೆ ಪಕ್ಷಕ್ಕಿಂತ ಸರ್ಕಾರವೇ ಮುಖ್ಯವಾಗಿದೆ. ಪಕ್ಷವಿದ್ದರೇ ಸರ್ಕಾರ, ಅಧಿಕಾರ ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಲೇ ಬೆಳೆದವರು ದೇವೇಗೌಡರು ಇಂದು ಕುಟುಂಬ ಬಿಟ್ಟು ರಾಜಕಾರಣ ಮಾಡಲಾಗಲ್ಲ ಎನ್ನುತ್ತಾರೆ. ಅಂಬಿಯಿಂದ ಹೆಚ್ಚು ಸಹಾಯ ಆಗಿರುವುದು ಜೆಡಿಎಸ್ಗೆ, ಆದರೆ ಅಂತಹವರೇ ಅಂಬರೀಶ್ ಅವರ ವಿರುದ್ಧ ಮಾತನಾಡುತ್ತಾರೆ. ಸುಮಲತಾರನ್ನು ಮಂಡ್ಯ ಗೌಡ್ತಿ ಎನ್ನುತ್ತಾರೆ. ಹೆಣ್ಣಿನ ಬಗ್ಗೆ ಸಣ್ಣತನದ ಹೇಳಿಕೆ ಕೊಡುತ್ತಾರೆ. ಇದು ನಮ್ಮ ಭಾರತೀಯ ಸಂಸ್ಕೃತಿಗೆ ಅಗೌರವ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯ ಹಾಸನದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ ಇಳಿದರೆ, ಎ. ಮಂಜು ಅವರು ಪ್ರತಿಸ್ಪರ್ಧಿ ಆಗಲಿದ್ದಾರ ಎಂಬುವುದು ಕುತೂಹಲ ಮೂಡಿಸಿದೆ. ಅಲ್ಲದೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರಾ? ಎಂಬ ಚರ್ಚೆ ರಾಜಕೀಯ ವಲಯದಿಂದ ಕೇಳಿ ಬಂದಿದೆ. ಮಾಧ್ಯಮಗಳಿಂದ ಈ ಬಗ್ಗೆ ಪ್ರಶ್ನೆ ಕೇಳಿ ಬಂದರು ಪಕ್ಷದ ನಿರ್ಧಾರ ಮೇಲೆ ನನ್ನ ತೀರ್ಮಾನ ಆಗುತ್ತದೆ ಎಂದು ಹೇಳುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv