ಉಡುಪಿ: ಇಬ್ಬರು ಯುವಕರಿಗೆ ನಗರ ಸಭಾ ಸದಸ್ಯ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ನಗರಸಭೆಯ ಕಾಂಗ್ರೆಸ್ ನ ಸದಸ್ಯ ಆರ್.ಕೆ.ರಮೇಶ್ ಪೂಜಾರಿ ಹಲ್ಲೆ ನಡೆಸಿದವರು. ಪರ್ಕಳದ ಗಣೇಶ್ ಆಚಾರ್ಯ ಮತ್ತು ಪ್ರಾಣೇಶ್ ಆಚಾರ್ಯ ಹಲ್ಲೆಗೊಳಗಾದ ಯುವಕರು. ನಗರದ ಗುಂಡಿಬೈಲು ಎಂಬಲ್ಲಿನ ಗಣೇಶ್ ಆಚಾರ್ಯ ಅವರ ತಂದೆಗೆ ಸಂಬಂಧಪಟ್ಟ ಆಸ್ತಿ ಇದೆ.
ಇದೇ ಪರಿಸರದಲ್ಲಿ ನಗರಸಭಾ ಕಾಮಗಾರಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯದಂತೆ ಗಣೇಶ್ ಆಚಾರ್ಯ ವಿನಂತಿಸಿದ್ದರು. ಆದರೆ ಮರುದಿನ ಬಂದು ನೋಡಿದಾಗ ಎಲ್ಲಾ ಮರಗಳನ್ನು ನೆಲಕ್ಕುರುಳಿಸಲಾಗಿತ್ತು. ಇದನ್ನು ಪ್ರಶ್ನಿಸಿದ ಆಚಾರ್ಯ ಸಹೋದರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ರಮೇಶ್ ಪೂಜಾರಿ ಸಹೋದರ ಪ್ರಕಾಶ್ ಮತ್ತು ಇತರ ಗೂಂಡಾ ಪಡೆ ಸೇರಿ ಈ ದುಷ್ಕೃತ್ಯ ಎಸಗಿದೆ. ಈ ಸಂದರ್ಭದ ಜಟಾಪಟಿಯಲ್ಲಿ ಗಣೇಶ್ ಆಚಾರ್ಯರ ಚಿನ್ನದ ಸರವನ್ನು ಎಗರಿಸಿದ್ದಾರೆ. ರಮೇಶ್ ಪೂಜಾರಿ ಈ ಹಿಂದೆ ನಗರಸಭಾ ಸಭಾಂಗಣದಲ್ಲಿ ಮಾಧ್ಯಮದ ಮುಂದೆ ಸಮಸ್ಯೆ ಹೇಳಿಕೊಂಡು ಬಂದ ಸಾಮಾನ್ಯ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದರು.
ಹ್ಯಾರಿಸ್ ಪುತ್ರ ನಲಪಾಡ್ ಮತ್ತು ಶಾಸಕ ಭೈರತಿ ಆಪ್ತನ ಪುಂಡಾಟ ಪ್ರಕರಣ ಬಿಸಿಯಾಗಿರುವಾಗಲೇ ಉಡುಪಿಯಲ್ಲಿ ನಗರಸಭೆಯ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾಗಿರಿ ಮೆರೆದಿದ್ದಾರೆ. ಆರ್. ಕೆ ರಮೇಶ್ ಪೂಜಾರಿ ಇಂತಹ ಹಲವಾರು ಗೂಂಡಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂಬುದು ಬಿಜೆಪಿಗರ ಆರೋಪ.