-ಅತೃಪ್ತರ ನಾಯಕರಲ್ಲಿ ಸಿದ್ದರಾಮಯ್ಯ ಬಹಿರಂಗ ಮನವಿ
ಬೆಂಗಳೂರು: ಬಿಜೆಪಿ ಮುಳುಗುತ್ತಿರುವ ಹಡಗು. ನಮ್ಮವರು ಅದರಲ್ಲಿ ಯಾಕೆ ಕುಳಿತುಕೊಳ್ಳಲು ಹೋಗ್ತಿದ್ದಾರೋ ಗೊತ್ತಿಲ್ಲ. ಯಾರು ಬಿಜೆಪಿಯ ಆಮಿಷಗಳಿಗೆ ಒಳಗಾಗಬೇಡಿ ಎಂದು ಹೇಳುವ ಮೂಲಕ ಅತೃಪ್ತ ಶಾಸಕರಿಗೆ ಸಿಎಲ್ಪಿ ನಾಯಕ, ಮಾಜಿ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.
ಆಪರೇಷನ್ ಎಂಬ ಪದವನ್ನು 2008ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿಚಯಿಸಿದ ನಾಯಕ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೇ ಗೆಲ್ಲೋದು, ನಮ್ಮದೇ ಸರ್ಕಾರ ಬರಲಿದೆ. ಒಂದು ಪಕ್ಷದಿಂದ ಗೆಲುವು ಸಾಧಿಸಿ ಮತ್ತೊಂದು ಕಡೆ ಹೋಗುವುದು ತಪ್ಪಾಗುತ್ತದೆ. ಸುಮ್ಮನೇ ಮುಳಗುವ ಹಡಗಿನಲ್ಲಿ ಕುಳಿತುಕೊಳ್ಳಬಾರದು ಎಂದು ತಮ್ಮ ಶಾಸಕರಿಗೆ ಮಾಜಿ ಸಿಎಂ ಸಲಹೆ ನೀಡಿದರು.
ಕಾಂಗ್ರೆಸ್ ಶಾಸಕಾಂಗ ಸಭೆಯ ಐವರು ಅತೃಪ್ತ ಶಾಸಕರು ಮಾತ್ರ ಆಗಮಿಸಿದ್ದು, ಉಳಿದಂತೆ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲವರು ಮಾತ್ರ ಇದೂವರೆಗೂ ಬಂದಿಲ್ಲ. ಹೀರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ವಿವಾಹ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರಿಗೆ ತಿಳಿಸಿ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ಕಂಪ್ಲಿ ಗಣೇಶ್ ಮತ್ತು ನಾಗೇಂದ್ರ ಶಾಸಕಾಂಗ ಸಭೆಗೆ ಇದೂವರೆಗೂ ಹಾಜರಾಗಿಲ್ಲ. ಬೆಂಗಳೂರಿನಲ್ಲಿರುವ ಶಾಸಕರಾದ ನಾಗೇಂದ್ರ ಮತ್ತು ಗಣೇಶ್ ಸಭೆಗೆ ಬಂದಿಲ್ಲ. ಸಭೆಗೆ ಗೈರಾಗುವ ನಾಯಕರ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಮುಂದೆ ಅವರನ್ನೇ ಆಪರೇಷನ್ ಕಮಲದಡಿ ಸೆಳೆಯುವ ಪ್ರಯತ್ನ ಮಾಡುತ್ತಿದೆ. ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಮತ್ತು ನಾಗೇಂದ್ರ ಈ ಮೂವರ ನಡೆ ಮಾತ್ರ ಇನ್ನು ನಿಗೂಢವಾಗಿದೆ.
ಶಾಸಕಾಂಗ ಸಭೆಗೆ ಗೈರಾಗುವ ಶಾಸಕರು ನಾಳೆ ರಾಜೀನಾಮೆ ಕೊಡುತ್ತಾರಾ ಅಥವಾ ಅದಕ್ಕೂ ಮೊದಲೇ ಪಕ್ಷದಿಂದಲೇ ಉಚ್ಛಾಟನೆ ಮಾಡ್ತಾರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿವೆ. ಸಭೆ ಹಾಜರಾಗದ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಪಡೆಯದೇ ಹಿಂದೇಟು ಹಾಕಬಹುದು. ಒಟ್ಟು 80 ಶಾಸಕರಲ್ಲಿ 72 ಜನರು ಹಾಜರಾಗಿದ್ದು, 6 ಜನ ಪ್ರತಿನಿಧಿಗಳು ಗೈರಾಗಿದ್ದಾರೆ.
ಇಂದು ಬಿಸಿಪಾಟೀಲ್ ಅವರ ಪುತ್ರಿ ಮದುವೆ ಹಿನ್ನೆಲೆಯಲ್ಲಿ ಕೆಲವು ಶಾಸಕರು ಮೊದಲೇ ಅನುಮತಿ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಸಿಎಲ್ಸಿ ಸಭೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್, ಪರಿಷತ್ ಸದಸ್ಯರು ಸೇರಿದಂತೆ ಎಲ್ಲರು ಹಾಜರಾಗಿದ್ದರು. ಗೈರಾಗುವ ನಾಯಕರ ಮೇಲೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಸಭೆಯ ಬಳಿಕ ಸಿದ್ದರಾಮಯ್ಯ ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv