ಬೀದರ್: ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲಿ ಬೀದರ್ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ದಿವಂಗತ ಮಾಜಿ ಸಿಎಂ ಧರಂಸಿಂಗ್ ಪುತ್ರನ ವಿರುದ್ಧ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಧರಂಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯ್ಸಿಂಗ್ ವಿರುದ್ಧ ಔರಾದ್ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯ್ಕುಮಾರ್ ಕೌಡಿಯಾಳ ದೂರು ನೀಡಿದ್ದಾರೆ. ಅವರಿಬ್ಬರ ಮಧ್ಯ ಸ್ಥಳೀಯ ಚುನಾವಣೆಗೆ ಬಿ ಫಾರಂ ಹಂಚಿಕೆ ವಿಷಯಕ್ಕೆ ಮಾತಿನ ಚಕಮಕಿಯಾಗಿ ವಿಜಯ್ಸಿಂಗ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ವಿಜಯ್ಕುಮಾರ್ ಅವರು ಎಸ್ಪಿಗೆ ದೂರು ಸಲ್ಲಿಸಿದ್ದಾರೆ.
ಮೇ 14ರಂದು ಔರಾದ್ ಪಟ್ಟಣ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ಪಕ್ಷದ ಕಾರ್ಯದರ್ಶಿ ಉಬೇದುಲ್ಲಾ ಶೇರಿಫ್, ಡಾ ಶೈಲಾಜನಾಥ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ವಿಜಯ್ಸಿಂಗ್ ಅವರು ವಿಜಯ್ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಾಡಲಾಗುತ್ತದೆ. ಆದರೆ ಈ ಆರೋಪವನ್ನು ವಿಜಯ್ಸಿಂಗ್ ತಳ್ಳಿ ಹಾಕಿದ್ದಾರೆ.