ನವದೆಹಲಿ: ಕಾಂಗ್ರೆಸ್ (Congress) ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಯ (Emergency) ಕಳಂಕವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ.
ಸಂಸತ್ತಿನಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಅವರು ಉತ್ತರಿಸಿದರು. ನಾವು ಸಂವಿಧಾನದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ವೇಳೆ ಹಿಂತಿರುಗಿ ನೋಡಿದರೆ, ಭಾರತದ ಸಂವಿಧಾನವು 25 ವರ್ಷಗಳನ್ನು ಪೂರೈಸಿದಾಗ, ತುರ್ತು ಪರಿಸ್ಥಿತಿಯನ್ನು ಬಳಸಿ ಅದನ್ನು ಕಿತ್ತುಕೊಂಡು ಭಾರತವನ್ನು ಜೈಲಿನಂತೆ ಮಾಡಲಾಯಿತು. ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸಂವಿಧಾನದ ಬಗ್ಗೆ ಚರ್ಚೆ ನಡೆಯುವಾಗ ನಾವು ಯಾವಾಗಲೂ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತೇವೆ. ಇದನ್ನು ಕಾಂಗ್ರೆಸ್ನಿಂದ ಅಳಿಸಲು ಸಾಧ್ಯವಿಲ್ಲ ಎಂದು ಅವರು ಕುಟುಕಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ ಸೋಲನುಭವಿಸುತ್ತಿರುವಾಗ ತುರ್ತು ಪರಿಸ್ಥಿತಿ ಹೇರಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ. ಇಂದಿರಾ ಗಾಂಧಿಯವರ ಆಯ್ಕೆಯನ್ನು ಅನೂರ್ಜಿತ ಎಂದು ಘೋಷಿಸಲಾಯಿತು. ಆ ನಂತರ ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಕೋಪದಿಂದ ತುರ್ತು ಪರಿಸ್ಥಿತಿಯನ್ನು ಹೇರಿದರು. ಅವರು ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರು ಎಂದು ವಾಗ್ದಾಳಿ ನಡೆಸಿದ್ದಾರೆ.
ಆ ಅನ್ಯಾಯದ ಸಮಯದಲ್ಲಿ ನೂರಾರು ಜನರನ್ನು ಜೈಲಿಗೆ ತಳ್ಳಲಾಯಿತು. ಸರ್ಕಾರ ಜನರ ಮಾತನ್ನು ಕೇಳಲಿಲ್ಲ. ಅಲ್ಲದೇ ನ್ಯಾಯಕ್ಕಾಗಿ ಹೋರಾಡುವ ಮಹಿಳೆಗೆ ಸಹಾಯ ಮಾಡುವ ಬದಲು ಅವರು ಕೆಟ್ಟ ಜನರನ್ನು ಬೆಂಬಲಿಸಿದರು. ನೆಹರೂ ಜಿ ಅದನ್ನು ಪ್ರಾರಂಭಿಸಿದರು, ಇಂದಿರಾಜಿ ಅದನ್ನು ಮುಂದಕ್ಕೆ ಕೊಂಡೊಯ್ದರು. ನಂತರ ರಾಜೀವ್ ಗಾಂಧಿಯವರಿಗೂ ಅದರ ರುಚಿ ಸಿಕ್ಕಿತು. ಮುಂದಿನ ಪೀಳಿಗೆಯೂ ಅದನ್ನೇ ಮುಂದುವರಿಸುತ್ತದೆ ಎಂದಿದ್ದಾರೆ.