ಚಿಕ್ಕಬಳ್ಳಾಪುರ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ವಿಕೇಂಡ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘನೆ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ.
ಕೊರೊನಾ ಆತಂಕ, ಓಮಿಕ್ರಾನ್ ಭೀತಿ ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಾವಿರಾರು ಜನ ಸೇರುವ ಕಾರಣ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ವಿಜೃಂಭಣೆಯ ಬ್ರಹ್ಮರಥೋತ್ಸವ ರದ್ದು ಮಾಡಲಾಗಿತ್ತು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಆದೇಶ ಮಾಡಿದ್ರು. ಇನ್ನೂ ಧಾರ್ಮಿಕ ಕೈಂಕರ್ಯಗಳು ಸಂಪ್ರದಾಯಗಳು ಮುರಿಯಬಾರದು ಎಂಬ ಉದ್ದೇಶದಿಂದ ದೇವಾಲಯದ ಒಳಭಾಗದಲ್ಲೇ ಸಣ್ಣ ರಥದ ಮೂಲಕ ದೇವಾಲಯದ ಅರ್ಚಕರು, ಆಡಳಿತ ಮಂಡಳಿ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸೇರಿ ಸಂಪ್ರದಾಯಬದ್ಧವಾಗಿ ಬ್ರಹ್ಮರಥೋತ್ಸವ ನಡೆಸಲು ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ
ಈ ಕಾರಣಕ್ಕೆ ಜನ ಸಾಮಾನ್ಯರು, ಭಕ್ತಾದಿಗಳು ದೇವಾಲಯಕ್ಕೆ ಬರಬಾರದು ಎಂದು 3 ಕಿಲೋಮೀಟರ್ ದೂರದಲೇ ರಸ್ತೆ ಮಧ್ಯೆ ಬ್ಯಾರಿಕೇಡ್ ಹಾಕಿ ತಡೆಯಲಾಗಿತ್ತು. ಆದ್ರೆ ಜನಸಾಮಾನ್ಯರಿಗೊಂದು, ಜನಪ್ರತಿನಿಧಿಗಳಿಗೊಂದು ನಿಯಮ ಎಂಬಂತೆ ಸರಳ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಸ್ಥಳೀಯ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ದೇವನಹಳ್ಳಿಯ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿಯಾಗಿದ್ದಾರೆ.
ಶಾಸಕರ ಜೊತೆಗೆ ತಮ್ಮ ಬೆಂಬಲಿಗರು ಹಾಗೂ ಕುಟುಂಬಸ್ಥರನ್ನ ವಿಕೇಂಡ್ ಕರ್ಫ್ಯೂ ವೇಳೆ ದೇವಾಲಯಕ್ಕೆ ಕರೆ ತಂದು ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಈ ಶಾಸಕರ ಜೊತೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸಹ ಇದ್ದರು. ಇದ್ರಿಂದ ಜನ ನಮಗೊಂದು ನ್ಯಾಯ ನಿಮಗೊಂದು ನ್ಯಾಯನಾ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಅಮಾನವೀಯ, ಇದೊಂದು ಅವೈಜ್ಞಾನಿಕ ಕ್ರಮ: ಎ.ಎಸ್.ಪೊನ್ನಣ್ಣ