ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರು ವಿಕಾಸ ಸೌಧದ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿದ್ದು, ಸುಮಾರು 8 ಗಂಟೆಗೆ ಈಗಲ್ ಟನ್ ರೆಸಾರ್ಟ್ ನಿಂದ ಹೊರಡಲಿದ್ದಾರೆ. ಕಾಂಗ್ರೆಸ್ ಶಾಸಕರು ಇಂದು ಮುಂಜಾನೆ ಎದ್ದು ಪ್ರತಿಭಟನೆಗೆ ರೆಡಿಯಾಗುತ್ತಿದ್ದಾರೆ. ಶಾಸಕರನ್ನು ಕರೆದೊಯ್ಯಲು ಎರಡು ಬಸ್ ಆಗಮಿಸಿದೆ.
ಜೆಡಿಎಸ್ ಶಾಸಕರು ಹೋಟೆಲ್ ಶಾಂಗ್ರಿಲಾದಲ್ಲಿ ತಮ್ಮ ರಾತ್ರಿಯನ್ನು ಕಳೆದಿದ್ದು, ತಡರಾತ್ರಿವರೆಗೂ ಸುಪ್ರೀಂಕೋರ್ಟ್ ಬೆಳವಣಿಗೆಗಳನ್ನ ಗಮನಿಸಿದ್ದಾರೆ. ಬಿಎಸ್ ವೈ ಪ್ರಮಾಣವಚನಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಪ್ರತಿಭಟನೆ ಮಾಡಲು ಜೆಡಿಎಸ್ ನಿರ್ಧರಿಸಿದೆ. ನಂತರ ಶಾಂಗ್ರಿಲಾದಿಂದ ಬೇರೆ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಶಿಫ್ಟ್ ಆಗಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ಈಗಾಗಲೇ ಶಾಸಕರನ್ನ ಕರೆದೊಯ್ಯಲು ಶಾಂಗ್ರಿಲಾ ಮುಂದೆ ಬಸ್ ಕೂಡ ಬಂದು ನಿಂತಿದೆ. ಅಲ್ಲದೆ ಬಟ್ಟೆ ಬರೆ ರೆಡಿ ಮಾಡಿಟ್ಟುಕೊಳ್ಳುವಂತೆ ಜೆಡಿಎಸ್ ಶಾಸಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.