ಕೋಲಾರ: ಜಿಲ್ಲೆಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸಂಬಂಧ ಕೆ.ಎಚ್ ಮುನಿಯಪ್ಪ ಕಾರ್ಯಕರ್ತರ ಸಭೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ.
ಕೋಲಾರ ಕಾಂಗ್ರೆಸ್ ಕಚೇರಿ (Kolar Congress Office) ಯ ಬಳಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮುಂಭಾಗದಲ್ಲೇ ಕಾರ್ಯಕರ್ತರು ಕೂಗಾಟ, ನೂಕಾಟ ನಡೆಸಿದ್ದಾರೆ. ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಕೂಗಾಟ ಶುರು ಮಾಡಿದರು. ಕೆ.ಎಚ್ ಮುನಿಯಪ್ಪ (K. H Muniyappa) ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ನಿಮಿಬ್ಬರ ಜಗಳದಿಂದ ಸಿದ್ದರಾಮಯ್ಯ ಬರೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಿಮ್ಮಿಬ್ಬರ ಬಣದಿಂದ ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಹಾಳಾಗ್ತಿದೆ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಏಕಾಏಕಿ ರಮೇಶ್ ಕುಮಾರ್ ಬಣದವರು ಪ್ರವೇಶ ಮಾಡುತ್ತಿದಂತೆ ಗಲಾಟೆ ಜೋರಾಗಿದೆ. ಈ ವೇಳೆ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಕಾರ್ಯಕರ್ತರು ಕಿತ್ತಾಟ ಶುರು ಮಾಡಿಕೊಂಡರು.
ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುನಿಯಪ್ಪ, ಇಬ್ಬರು, ಮೂವರು ಗೊಂದಲ ಸೃಷ್ಟಿಸಿದ್ದಾರೆ. ಇಲ್ಲಿ ಗುಂಪುಗಾರಿಕೆ, ಗೊಂದಲಗಳಿವೆ. ಸರಿ ಮಾಡಿ ಬನ್ನಿ ಎಂದು ಸಿದ್ದರಾಮಯ್ಯಗೆ ಎಚ್ಚರಿಸಿದ್ದೇನೆ. ಸಿದ್ದರಾಮಯ್ಯ ಗೊಂದಲ ಸೃಷ್ಟಿ ಮಾಡಿಕೊಳ್ಳಬಾರದು. ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ಸಿದ್ದರಾಮಯ್ಯ ಪರ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಬರಲಿಲ್ಲ ಅನ್ನೋದಾದ್ರೆ ಸ್ಥಳೀಯರಿಗೆ ಅವಕಾಶ ಕೊಡಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗೋಣ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಟೈಮ್ ಪ್ಲೇಯರ್: MLC ಚನ್ನರಾಜ ಹಟ್ಟಿಹೊಳಿ
ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ನಾವು ಸ್ವಾಗತ ಮಾಡಿ ಕೆಲಸ ಮಾಡುತ್ತೇವೆ. ಸಿದ್ದರಾಮಯ್ಯ ಬರಲಿಲ್ಲ ಅನ್ನೋದಾದ್ರೆ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದೇನೆ. ಯಾರಿಗೆ ಟಿಕೆಟ್ ನೀಡಿದ್ರು ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗೋಣ ಎಂದು ನಾನು ನಮ್ಮ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಸಭೆ ಸಮಾರಂಭಗಳನ್ನು ಯಾರು ಏಕಪಕ್ಷೀಯವಾಗಿ ಮಾಡಬಾರದು. ಸಿದ್ದರಾಮಯ್ಯ ಸಿಎಂ ಆಗಿದ್ದವರು, ಅವರನ್ನು ಯಾರೂ ತಡಿಯೋಕೆ ಆಗುತ್ತೆ. ಎಲ್ಲಿ ಬೇಕಾದ್ರೂ ಸಿದ್ದರಾಮಯ್ಯ ಸ್ಪರ್ಧೆ ಮಾಡಬಹುದು ಎಂದರು.
ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸ ಮಾಡಬೇಕು, ಇಲ್ಲಿ ಸಿದ್ದರಾಮಯ್ಯ ಗೊಂದಲ ಸೃಷ್ಟಿ ಮಾಡಿಕೊಳ್ಳಬಾರದು. ಇದನ್ನು ಹೈಕಮಾಂಡ್ ಸಹ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಹೈಕಮಾಂಡ್ ಶೀಘ್ರದಲ್ಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ತಿಳಿಸಿದರು.