ಚಿಕ್ಕಬಳ್ಳಾಪುರ/ಕೋಲಾರ: ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇದ್ದು ಚುನಾವಣೆ (Election) ಎದುರಿಸೋಕೆ ಸರ್ವ ಪಕ್ಷಗಳು ಸಕಲ ಸನ್ನದ್ಧವಾಗುತ್ತಿವೆ. ಅಂತೆಯೇ ಕಾಂಗ್ರೆಸ್ ಪಕ್ಷದಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ವೇಳೆ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆಯೇ ವಾಗ್ವಾದ ಉಂಟಾಗಿದೆ. ಚಿಕ್ಕಬಳ್ಳಾಪುರದಲ್ಲಿ ಶಾಸಕ ಹಾಗೂ ಕೋಲಾರಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಹೌದು. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ಖಾಸಗಿ ಕಲ್ಯಾಣಮಂಟಪದಲ್ಲಿ ಉಸ್ತುವಾರಿ ರಾಮಲಿಂಗಾರೆಡ್ಡಿ (Ramalingareddy), ಉಗ್ರಪ್ಪ (Ugrappa) ಸಮ್ಮುಖದಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಕಾಂಕ್ಷಿತ ಅಭ್ಯರ್ಥಿಗಳ ಬೆಂಬಲಿಗರ ಅಭಿಪ್ರಾಯ ಸಂಗ್ರಹ ಸಭೆ ನಡೆಸಲಾಯ್ತು. ಸಭೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದ ಹಾಲಿ ಶಾಸಕ ವಿ.ಮುನಿಯಪ್ಪ ಹಾಗೂ ಸಮಾಜಸೇವೆಯ ಹೆಸರಲ್ಲಿ ರಾಜಕೀಯಕ್ಕೆ ಧುಮುಕಿರೋ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ರಾಜೀವ್ ಗೌಡ (Rajeev Gowda) ಬೆಂಬಲಿಗರ ನಡುವೆ ಟಿಕೆಟ್ ವಿಚಾರಕ್ಕೆ ವಾಗ್ವಾದ ನಡೆದಿದೆ. ರಾಜೀವ್ ಗೌಡ ಹಾಗೂ ವಿ ಮುನಿಯಪ್ಪ ಬೆಂಬಲಿಗರು ತಮಗೆ ಟಿಕೆಟ್ ಕೊಡಬೇಕು ಅಂತ ಪರಸ್ಪರರು ಗಲಾಟೆ ಮಾಡಿದ್ರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ. ಮುನಿಯಪ್ಪನವರ ಪರವಾಗಿ ಆಗಮಿಸಿದ್ದ ಬೆಂಬಲಿಗರು ಯಾವುದೇ ಕಾರಣಕ್ಕೂ ರಾಜೀವ್ ಗೌಡಗೆ ಟಿಕೆಟ್ ಕೊಡಬಾರದು. ರಾಜೀವ್ ಗೌಡಗೂ ಶಿಡ್ಲಘಟ್ಟಕ್ಕೂ ಏನ್ ಸಂಬಂಧ ಅಂತ ಪ್ರಶ್ನೆ ಮಾಡಿದ್ದಾರೆ. ಆದ್ರೆ ರಾಜೀವ್ ಗೌಡನ ಬೆಂಬಲಿಗರು ವಿ ಮುನಿಯಪ್ಪ ಶಾಸಕರಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನ ಮಾಡಿಲ್ಲ. ರಾಜೀವ್ ಗೌಡರಿಗೆ ಟಿಕೆಟ್ ಕೊಡಬೇಕು ಅಂತ ಒತ್ತಾಯ ಮಾಡಿದ್ರು. ಇದನ್ನೂ ಓದಿ: JDS ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ – ಬಿಜೆಪಿ ನಾಯಕರಿಗೆ ಅಮಿತ್ ಶಾ ತಾಕೀತು
ಕೋಲಾರದಲ್ಲಿ ಅದ್ಯಾಕೋ ಕೆ.ಹೆಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣ ಬಡಿದಾಟ ಸದ್ಯಕ್ಕೆ ನಿಲ್ಲುವಂತಹ ಯಾವುದೇ ಲಕ್ಷಣ ಕಾಣ್ತಿಲ್ಲ. ಕೋಲಾರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸದಸ್ಯರ ಸಭೆಯಲ್ಲಿ ಮತ್ತೆ ಈ ಎರಡು ಗುಂಪುಗಳ ನಡುವೇ ವಾಗ್ವಾದ ಉಂಟಾಗಿದೆ. ಕೋಲಾರಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಕಾಂಗ್ರೆಸ್ ನಾಯಕರ ಎದುರೇ ಕಾರ್ಯಕರ್ತರು ಘೋಷಣೆ ಕೂಗಿರುವುದು ತಲೆನೋವು ತರಿಸಿದೆ.
ಒಟ್ಟಾರೆ ಮುಂಬರುವ ವಿಧಾನಸಭೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದಾರೆ. ಇತ್ತ ಕಾರ್ಯಕರ್ತರು ಕೂಡ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಕಾರ್ಯಕರ್ತರನ್ನ ಹೇಗೆ ಸಮಾಧಾನ ಪಡಿಸಲಿದ್ದಾರೆ ಅನ್ನೋದನ್ನ ಕಾದುನೋಡಬೇಕಿದೆ.