ಮೈಸೂರು: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇಂದು ಕೆ.ಆರ್. ನಗರ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡುತ್ತಾ ಸಿಎಂ, ಸಾಲಮನ್ನಾ ಅಸ್ತ್ರ ಪ್ರಯೋಗ ಮಾಡಿದರು. ನಾನು ಮಾಡಿದ ಕೆಲಸದ ಬಗ್ಗೆ ವರದಿ ಕೊಡೋಕೆ ಸಿದ್ಧ ಇದ್ದೇನೆ. ಬಿಜೆಪಿ (BJP) ಅವರು ಮಾಡಿದ ಕೆಲಸದ ಬಗ್ಗೆ ವರದಿ ಕೊಡುತ್ತಾರಾ?. ಕುಮಾರಸ್ವಾಮಿ (HD KUmaraswamy) ಎರಡು ಬಾರಿ ಸಿಎಂ ಆಗಿದ್ರಿ? ರೈತರ ಸಾಲ ಮನ್ನಾ ಮಾಡಿದ್ರಾ?. ಜೆಡಿಎಸ್ ಬಿಜೆಪಿ ‘ಬಿ’ ಟೀಂ ಅಂತಾ ನಾನು ಹೇಳಿದ್ದಾಗ ದೇವೇಗೌಡರು ಕೆಂಡಾಮಂಡಲಾಗಿದ್ದರು. ಈಗ ಏನ್ ಹೇಳುತ್ತೀರಿ ದೇವೇಗೌಡರೇ ಎಂದು ಪ್ರಶ್ನಿಸಿದರು.
ಮೋದಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ. ಕೊಟ್ಟ ಯಾವ ಭರವಸೆಗಳನ್ನು ಮೋದಿ (Narendra Modi) ಈಡೇರಿಸಿಲ್ಲ. ಉದ್ಯೋಗ ಕೇಳಿದರೆ ಪಕೋಡ ಮಾರಿ ಎಂದ ಮೋದಿ ಈ ದೇಶದ ಪ್ರಧಾನ ಮಂತ್ರಿ ಆಗೋಕೆ ಲಾಯಕ್ ಇದ್ದಾರಾ ಎಂದು ಸಿಎಂ ಪ್ರಶ್ನಿಸಿದರು.
ಮೋದಿ ಅವರನ್ನು ದೇವೇಗೌಡರು ಹೊಗಳಿದ್ದೇ ಹೊಗಳಿದ್ದು. ನಾನು ಸತ್ಯ ಹೇಳಿದ್ರೆ ಸಿದ್ದರಾಮಯ್ಯಗೆ (Siddaramaiah) ಗರ್ವ ಬಂದಿದೆ. ಗರ್ವಭಂಗ ಮಾಡಿ ಅಂತಾ ದೇವೇಗೌಡರು ಹೇಳುತ್ತಾರೆ. ಕೋಲಾರ ಮೀಸಲು ಕ್ಷೇತ್ರ ಆಗದೇ ಇದ್ದರೆ ಅಲ್ಲೂ ದೇವೇಗೌಡರ ಮನೆಯವರೇ ನಿಲ್ಲುತ್ತಿದ್ದರು. ಕುಟುಂಬದ ರಕ್ಷಣೆಗಾಗಿ ದೇವೇಗೌಡರು ಬಿಜೆಪಿ ಜೊತೆ ಸೇರಿದ್ದಾರೆ. ಚುನಾವಣೆ ಮುಗಿದ ಕೂಡಲೇ ನಮ್ಮ ಸರ್ಕಾರ ಪತನ ಆಗುತ್ತೆ ಅಂತಾರೆ. ಸರ್ಕಾರ ಪತನ ಹೇಗೆ ಮಾಡುತ್ತೀರಿ? ಚುನಾವಣೆ ಆದ ಮರುದಿನವೇ ಸರ್ಕಾರ ಹೇಗೆ ಬೀಳುತ್ತೆ ಹೇಳಿ? ಎಂದರು. ಇದನ್ನೂ ಓದಿ: ಹೆಣ್ಣುಮಕ್ಕಳ ಬ್ಯಾಗ್ನಲ್ಲಿ ಸರ್ಕಾರ ಎಕೆ-47 ಗನ್ ಇಡಬೇಕು: ವೀರೇಶ್ವರ ಸ್ವಾಮೀಜಿ
ಐದು ವರ್ಷವೂ ಈ ಸರ್ಕಾರ ಇರುತ್ತೆ. ಮುಂದಿನ ಚುನಾವಣೆಯಲ್ಲೂ ನಮ್ಮದೆ ಸರ್ಕಾರ ಬರುತ್ತದೆ. ಹಗಲು ಕನಸು ಕಾಣುತ್ತಿದ್ದಿರಿ. ಇವರು ಹೇಳಿದ ತಕ್ಷಣ ಸರ್ಕಾರ ಬೀಳುತ್ತಾ? ನಾನು ಎರಡು ಬಾರಿ ಸಿಎಂ ಆಗಿದ್ದಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಹೊಟ್ಟೆ ಉರಿ. ದೇವೇಗೌಡರು ಮಾತ್ರ ಅಧಿಕಾರದಲ್ಲಿ ಇರಬೇಕು. ಬೇರೆ ಯಾರೂ ಅಧಿಕಾರದಲ್ಲಿ ಇರಬಾರದು ಅನ್ನೋದು ದೇವೇಗೌಡರ ನೀತಿ. ನಾನು ಕುರುಬ ಅದಕ್ಕೆ ದ್ವೇಷ ಮಾಡುತ್ತಾರೆ. ಅವರು ಒಕ್ಕಲಿಗರನ್ನೂ ದ್ವೇಷ ಮಾಡುತ್ತಾರೆ. ಚೆಲುವರಾಯಸ್ವಾಮಿ, ಡಿ.ಕೆ. ಶಿವಕುಮಾರ್ ಮೇಲೆ ದ್ವೇಷ ಸಾಧಿಸುತ್ತಿಲ್ವಾ? ದೇವೇಗೌಡ ಮತ್ತು ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡುವುದರಲ್ಲಿ ನಿಸ್ಸಿಮರು. ದೇವೇಗೌಡರ, ಕುಮಾರಸ್ವಾಮಿ ಮಾತ್ರ ಸಾಚಾರು. ನಾವೆಲ್ಲರು ಕಳ್ಳರಾ ಎಂದು ಸಿಎಂ ಪ್ರಶ್ನಿಸಿದರು.