ಬೀದರ್: ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚೌವ್ಹಾಣ್ ಅವರು ಸ್ಥಾಪಿಸಿರುವ ದೂರು ಪೆಟ್ಟಿಗೆಯಲ್ಲಿ ದಾಖಲಾದ ದೂರುವೊಂದಕ್ಕೆ 24 ಗಂಟೆಯೊಳಗಡೆ ಸ್ಪಂದನೆ ಸಿಕ್ಕಿದೆ.
ಬೀದರ್ ಜಿಲ್ಲೆ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕುಡಿಯುವ ನೀರಿನ ಕೊರತೆಯಾಗಿದೆ ಎನ್ನುವ ದೂರು ಡಿ.26ರಂದು ದಾಖಲಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಸಚಿವರು, ಇಂದು ಡಿ.27ರಂದು ವಡಗಾಂವ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಪ್ರಭು ಅವರು ಅಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ನೀರಿನ ಕೊರತೆ ಕಂಡು ಆ ಕೂಡಲೇ ಕೊಳವೆ ಬಾವಿ ಕೊರೆಯುವ ವಾಹನವನ್ನು ಸ್ಥಳಕ್ಕೆ ಕರೆಯಿಸಿದರು. ಬೋರ್ ವೆಲ್ ಒಡೆಸುವ ಮೂಲಕ ಸಚಿವರು ಆ ಗ್ರಾಮದ ಆಸ್ಪತ್ರೆಯಲ್ಲಿದ್ದ ನೀರಿನ ಭವಣೆಯನ್ನು ನೀಗಿಸಿದರು.