ಪಣಜಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ (Lord Shiva) ಚಿತ್ರಗಳನ್ನು ಪ್ರದರ್ಶಿಸಿ ದೇವರಿಗೆ ಅಪಮಾನಿಸಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸನ್ಬರ್ನ್ ಇಡಿಎಂ ಉತ್ಸವದ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ (Congress) ಮತ್ತು ಆಮ್ ಆದ್ಮಿ ಪಕ್ಷ (AAP) ಒತ್ತಾಯಿಸಿದೆ.
ಸನ್ಬರ್ನ್ ಸಂಘಟಕರ ವಿರುದ್ಧ ಕಾಂಗ್ರೆಸ್ ಮುಖಂಡ ವಿಜಯ್ ಭಿಕೆ, ಮಾಪುಸಾದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಎಪಿ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು, ಸನಾತನ ಧರ್ಮವನ್ನು ಅಪಮಾನಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜ.14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ: ಮೋದಿ ಕರೆ
ಇದೇ ಡಿ.28 ರಂದು ಉತ್ತರ ಗೋವಾದ ವಗಾಟರ್ನಲ್ಲಿ ಸನ್ಬರ್ನ್ ಇಡಿಎಂನಿಂದ ಎಲೆಕ್ಟ್ರಾನಿಕ್ ನೃತ್ಯ ಸಂಗೀತ ಉತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭಗವಾನ್ ಶಂಕರನ ಚಿತ್ರವನ್ನು ಬಳಸಿರುವುದನ್ನು ನಾವು ನೋಡಿದ್ದೇವೆ. ಜನರು ಕುಡಿದು ನೃತ್ಯ ಮಾಡುವಾಗ ಎಲ್ಇಡಿ ಪರದೆಯ ಮೇಲೆ ದೇವ ಶಿವನ ಚಿತ್ರಗಳು ಪ್ರದರ್ಶನಗೊಂಡಿವೆ ಎಂದು ಪಾಲೇಕರ್ ಆರೋಪಿಸಿದ್ದಾರೆ.
ನಮ್ಮ ಸನಾತನ ಧರ್ಮದ ಪಾವಿತ್ರ್ಯತೆಗೆ ಧಕ್ಕೆಯಾಗಿರುವುದರಿಂದ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಎಎಪಿ ನಾಯಕ ತಿಳಿಸಿದ್ದಾರೆ. ಮದ್ಯ ಕುಡಿದು, ನೃತ್ಯ ಮಾಡುವಂತಹ ಕಾರ್ಯಕ್ರಮಗಳಲ್ಲಿ ನಮ್ಮ ದೇವರನ್ನು ಬಳಸುವುದು ಸರಿಯಲ್ಲ. ಸನ್ಬರ್ನ್ ಉತ್ಸವದ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಮಹಾನಿರ್ದೇಶಕರನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು
ಮಾಪುಸಾ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಕಾಂಗ್ರೆಸ್ ನಾಯಕ ವಿಜಯ್ ಭಿಕೆ, ಈ ಉತ್ಸವದಲ್ಲಿ ಮದ್ಯಪಾನ, ನಿಷೇಧಿತ ಪದಾರ್ಥಗಳ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವ ಶಿವನ ಚಿತ್ರಗಳನ್ನು ಬಳಿಸಿ, ಸಂಘಟಕರು ಉದ್ದೇಶಪೂರ್ವಕವಾಗಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ನಿಂದ ದೂರು ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?