-50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್
ಹುಬ್ಬಳ್ಳಿ: ಕೊಲೆ ಮಾಡಿದ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಪರಾಧ ಚಟುವಟಿಕೆಗಳನ್ನು ತಡೆಯುವ ಪೊಲೀಸರಿಗೆ ಮಾನಸಿಕ ಸ್ಥೈರ್ಯ ಕೊಡಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ.
ಸಮಾಜ ಅಂದ ಮೇಲೆ ಕೊಲೆ ಅಪರಾಧ ಚಟುವಟಿಕೆಗಳು ನಡೆಯುತ್ತಾನೆ ಇರುತ್ತವೆ. ಆದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಕಳಹಂತದ ಪೇದೆಗಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಬೇಕು. ಆಗ ಮಾತ್ರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಹುಬ್ಬಳ್ಳಿ ಧಾರವಾಡ ಮಹನಾಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಅಪರಾಧ ಚಟುವಟಿಕೆಗಳಿಗೆ ಇದೀಗ ಪೊಲೀಸ್ ಪೇದೆಗಳನ್ನು ಹೊಣೆಯಾಗಿಸುವ ಯತ್ನ ನಡೆಯುತ್ತಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಾಲ್ಕು ಕೊಲೆ, ಒಂದು ಶೂಟೌಟ್, ಸರಗಳ್ಳತನ ಸೇರಿದಂತೆ ಹಲವು ಗದ್ದಲ ಗಲಾಟೆ ಪ್ರಕರಣಗಳು ನಡೆದಿವೆ. ಈ ಅಪರಾಧ ಪ್ರಕರಣಗಳಿಗೆ ಇದೀಗ ಪೊಲೀಸ್ ಪೇದೆಗಳನ್ನೆ ಹೊಣೆಯಾಗಿಸಿ ಬರೋಬ್ಬರಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ 17 ಪೇದೆಗಳು, ಧಾರವಾಡ ಠಾಣೆಗಳ ವ್ಯಾಪ್ತಿಯಲ್ಲಿ 14 ಜನ ಪೇದೆಗಳನ್ನು ಅಮಾನತು ಮಾಡಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ. ಪಿಎಸ್ಐ, ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಇಲ್ಲದ ಶಿಕ್ಷೆ ನಮಗ್ಯಾಕೆ ಎಂದು ಪೇದೆಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಇದು ಸಿಬ್ಬಂದಿ ಮಾನಸಿಕ ಆತ್ಮಸ್ಥೈರ್ಯ ಕುಂದಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.