ಬೆಂಗಳೂರು: ರವಿ ಪೂಜಾರಿಯನ್ನು ಕರೆತಂದ ನಂತರ ಸಾಕಷ್ಟು ವಿಚಾರಗಳು ಹೊರ ಬರುತ್ತಿದೆ. ಆತ ಈ ಹಿಂದೆ ಮಾಡಿದ ಅಕ್ರಮಗಳು ಒಂದೊಂದಾಗಿ ಬಯಲಿಗೆ ಬರುತ್ತಿದ್ದರೆ, ಅಧಿಕಾರಿಯೊಬ್ಬರು ರವಿ ಪೂಜಾರಿ ಜೊತೆ ಒಡನಾಟ ಹೊಂದಿರುವ ಬಗ್ಗೆ ಆಘಾತಕಾರಿ ವಿಚಾರ ಹೊರಬಂದಿದೆ.
ಅಧಿಕಾರಿಯೊಬ್ಬರು ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸುವುದು ಸೂಕ್ತ ಅಲ್ಲ. ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಹೀಗಾಗಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಗೆ ಬೇರೆ ಪೋಸ್ಟ್ ತೋರಿಸಲಾಗಿದೆ. ಸರ್ಕಾರದ ವಿರುದ್ಧ, ದೇಶದ ವಿರುದ್ಧ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಜನರಿಗೆ ಮೋಸ ಮಾಡಿ ದೇಶಕ್ಕೆ ಮೋಸ ಮಾಡಿರುವ ಒಬ್ಬ ಕ್ರಿಮಿನಲ್ ಜೊತೆ ಸಂಪರ್ಕ ಇರುವ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಶಿಸ್ತಿನ ಕ್ರಮಕೈಗೊಳ್ಳುವ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಭಾಸ್ಕರ್ ರಾವ್ ರೌಡಿಗಳ ಜೊತೆ ಸಂಪರ್ಕ ಹೊಂದಿರುವ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ರೌಡಿಗಳ ಜೊತೆ ಸಂಪರ್ಕ ಇರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ. ಸ್ಲಂ ದೊರೆಗಳೇ ಇರಲಿ, ಯಾರೇ ಇರಲಿ ಅವರ ಜೊತೆ ಪೊಲೀಸರ ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕ್ರಮ ಗ್ಯಾರಂಟಿ. ಇಂತಹ ಕ್ರಿಮಿನಲ್ಗಳ ಜೊತೆ ಬರ್ತ್ ಡೇ ಪಾರ್ಟಿ ಮಾಡಿಕೊಳ್ಳುವುದು, ಅವರ ಜೊತೆ ವ್ಯವಹಾರಗಳನ್ನು ನಡೆಸುವುದು ಕಂಡು ಬಂದರೆ ಅವರ ಮೇಲೆ ಕ್ರಮ ಕಟ್ಟಿಟ್ಟ ಬುತ್ತಿ. ರಿಯಲ್ ಎಸ್ಟೆಟ್ ಮಾಡಿಸುವುದು, ಡೀಲಿಂಗ್ ಮಾಡಿಸುವುದು ಮಾಡಿದ್ದು ಗೊತ್ತಾದರೆ ಕ್ರಮ ನಿಶ್ಚಿತ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.