– ಉತ್ತರಕರ್ನಾಟಕದ ಸಂಪ್ರದಾಯದಂತೆ ಪುನೀತ್ ಮೂರ್ತಿಗೆ ಪೂಜೆ
ಹಾವೇರಿ: ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಹೆಸರಿನಲ್ಲಿ ನಿರ್ಮಾಣ ಆಗಿರುವ ಹಾವೇರಿ (Haveri) ತಾಲೂಕಿನ ಯಲಗಚ್ಚ ಗ್ರಾಮದ ದೇವಸ್ಥಾನದಲ್ಲಿ ಪುನೀತ್ ನಿತ್ಯವೂ ಪೂಜಿತರಾಗಿದ್ದಾರೆ. ಇಂದು ಪುನೀತ್ ನಿಧನರಾಗಿ ಮೂರು ವರ್ಷಗಳು ಕಳೆದಿದ್ದು, ಹೀಗಾಗಿ ಎಲ್ಲೆಡೆ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಮಾಡಲಾಗುತ್ತಿದೆ. ಪುನೀತ್ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ಅವರ ಪುಣ್ಯಸ್ಮರಣೆಯ ಸಂಭ್ರಮ ಮನೆ ಮಾಡಿದೆ.
ಗದಗ (Gadaga), ಧಾರಾವಾಡ (Dharawada), ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿ ಪುನೀತ್ ಮೂರ್ತಿಗೆ ಪೂಜೆ ಸಲ್ಲಿಸಿ, ಪುನೀತ್ ಸ್ಮರಣೆ ಮಾಡುತ್ತಿದ್ದಾರೆ. ಪುನೀತ್ ಅಂದರೆ ಅವರು ಅಭಿಮಾನಿಗಳ ಪಾಲಿನ ದೇವರು. 2021ರ ಅ.29 ರಂದು ಅಗಲಿದರು. ಯಲಗಚ್ಚ ಗ್ರಾಮದಲ್ಲಿ ಪುನೀತ್ ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಯಲಗಚ್ಚ ತಮ್ಮ ಮನೆಯ ಸ್ವಂತ ಜಾಗದಲ್ಲಿ ನೆಚ್ಚಿನ ನಟನ ದೇವಸ್ಥಾನ ನಿರ್ಮಿಸಿದ್ದಾರೆ. ಕಳೆದ ತಿಂಗಳು ಸೆ.26ರಂದು ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ದೇವಸ್ಥಾನ ಲೋಕಾರ್ಪಣೆ ಮಾಡಿ ಮೂರ್ತಿ ಅನಾವರಣ ಮಾಡಿದ್ದರು. ನಂತರ ದೇವಸ್ಥಾನದಲ್ಲಿ ಪ್ರತಿದಿನವೂ ಆ ಮೂರ್ತಿಗೆ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಗುತ್ತಿದೆ. ಇವತ್ತು ಆ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ದೂರದ ಊರುಗಳಿಂದ ಆಗಮಿಸಿದ್ದ ಪುನೀತ್ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನೆಚ್ಚಿನ ನಟನ ಸ್ಮರಣೆ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿನ ಮೂರ್ತಿ ಮುಂದೆ ನಿಂತು ಭಾವುಕರಾಗುತ್ತಿದ್ದಾರೆ. ಇದನ್ನೂ ಓದಿ: ಅಪ್ಪು ನಮ್ಮಲ್ಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ: ಶಿವರಾಜ್ಕುಮಾರ್
ತಮ್ಮ ಮನೆಯ ಆವರಣದಲ್ಲೇ ದೇವಸ್ಥಾನ ನಿರ್ಮಿಸಿರುವ ಅವರ ಅಪ್ಪಟ ಅಭಿಮಾನಿ ಪ್ರಕಾಶ್, ಪುನೀತ್ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ (Uttara Karnataka) ಭಾಗದಲ್ಲಿ ತಮ್ಮ ಮನೆಯ ಹಿರಿಯರು ಮೃತಪಟ್ಟ ನಂತರ ಪ್ರತಿವರ್ಷ ಮಾಡುವ ಹಿರಿಯರ ಹಬ್ಬದಂತೆಯೇ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರಿಗೆ ಇಷ್ಟವಾದ ವಾದ್ಯಗಳಾದ ಗಿಟಾರ್, ಹಾರ್ಮೋನಿಯಂ, ಹೊಸ ಬಟ್ಟೆಗಳು ಸೇರಿದಂತೆ ಮೂರ್ತಿಯ ಮುಂದೆ ಹಲವು ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಅವರಿಗೆ ಇಷ್ಟವಾದ ಕೋಳಿ ಕಬಾಬ್, ಬಿರಿಯಾನಿ, ಮಟನ್ ಬಿರಿಯಾನಿ, ಮೊಟ್ಟೆ ಸೇರಿದಂತೆ ಹಲವು ಬಗೆಗಳನ್ನು ತಯಾರಿ ಮಾಡಿದ್ದು, ಅದರ ಜೊತೆಗೆ ಸಿಹಿ ತಿನಿಸುಗಳನ್ನು ಸಹ ಭಾವಚಿತ್ರ ಹಾಗೂ ಮೂರ್ತಿಯ ಮುಂದಿಟ್ಟು ಪೂಜೆ ಸಲ್ಲಿಸಲಾಯಿತು. ಅಭಿಮಾನಿ ಪ್ರಕಾಶ್ ಅವರ ಕುಟುಂಬ ಸದಸ್ಯರು ತಮ್ಮ ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿ, ಭಾವುಕ ಕ್ಷಣಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್